ವಿಟ್ಲ: ಮಹಿಳೆ ನೇಣುಬಿಗಿದು ಆತ್ಮಹತ್ಯೆ
ವಿಟ್ಲ: ಮಹಿಳೆಯೋರ್ವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕುಳ ಗ್ರಾಮದ ಕಂಪ ಶ್ರೀಧರ ಗೌಡ ಎಂಬವರ ಪತ್ನಿ ರಾಧಾ ಯಾನೆ ಲತಾ(40ವ.) ಮೃತಪಟ್ಟವರು. ಘಟನೆ ಕುರಿತು ಅವರ ತಮ್ಮ ಕೊಯಿಲ ಪರಂಗಾಜೆ ನಿವಾಸಿ ಲೋಕೇಶ್ ಎಂಬವರು ನೀಡಿದ ದೂರಿನ ಮೇರೆಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಅಕ್ಕ ರಾಧಾ ಲತಾರವರನ್ನು ಸುಮಾರು 13 ವರ್ಷಗಳ ಹಿಂದೆ ಶ್ರೀಧರ ಗೌಡ ಅವರಿಗೆ ಮದುವೆ ಮಾಡಿಕೊಟ್ಟಿದ್ದು ಅವರ ದಾಂಪತ್ಯದಲ್ಲಿ ಇಬ್ಬರು ಮಕ್ಕಳಿರುತ್ತಾರೆ. ಸುಮಾರು 10 ವರ್ಷಗಳಿಂದ ಅಕ್ಕ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ವೈದ್ಯರಿಂದ ಚಿಕಿತ್ಸೆಯನ್ನು ಕೊಡಿಸಲಾಗುತ್ತಿತ್ತು. ಆದರೂ ಅಕ್ಕ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.
ಮೇ.6ರಂದು ಗಂಡನ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಅಕ್ಕ ಮಧ್ಯಾಹ್ನ ಆಕೆಯ ಮಾವ ಕುಕ್ಕಪ್ಪ ಗೌಡರಿಗೆ ಊಟವನ್ನು ಬಡಿಸಿಕೊಟ್ಟಿದ್ದರು. ಸಂಜೆ ಸಮಯ 4:45 ಗಂಟೆಯ ಹೊತ್ತಿಗೆ ಚಹಾ ತಯಾರಿಸಿ ಕೊಡಲು ಮಾವ ಅಕ್ಕನನ್ನು ಕರೆದಾಗ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದುದರಿಂದ ಮಾವ ಕುಕ್ಕಪ್ಪ ಗೌಡರು ಪಕ್ಕದಲ್ಲಿರುವ ಧರ್ಣಪ್ಪ ಗೌಡರವರ ಮನೆಯ ಬಳಿ ಹೋಗಿ ಕೇಳಿದಾಗ ಅಲ್ಲಿಯೂ ಇಲ್ಲದೇ ಇದ್ದುದರಿಂದ ಕುಕ್ಕಪ್ಪ ಗೌಡ ಹಾಗೂ ಧರ್ಣಪ್ಪ ಗೌಡ ಹಾಗೂ ಮನೆ ಹತ್ತಿರದ ಕುಟುಂಬಿಕರು ಅಕ್ಕ ರಾಧಳನ್ನು ಹುಡುಕಾಡಿಕೊಂಡು ಹೋದಾಗ ಕುಕ್ಕಪ್ಪ ಗೌಡರ ಮನೆಯ ಪಕ್ಕದಲ್ಲಿರುವ ದಾಸ್ತಾನು ಕೊಠಡಿಯ ಬಾಗಿಲನ್ನು ತೆರೆದು ನೋಡಿದಾಗ ಪಕ್ಕಾಸಿನ ಅಡ್ಡಕ್ಕೆ ಅಕ್ಕ ರಾಧಾ ಯಾನೆ ಲತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂತು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.





