ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಎಸ್ಡಿಪಿಐಗೆ ಹೆಚ್ಚು ಮತ: ಪಕ್ಷದ ಮಟ್ಟದಲ್ಲಿ ಪರಿಶೀಲನೆ: ಸಿದ್ದರಾಮಯ್ಯ
ಬೆಂಗಳೂರು: ‘ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಎಸ್ಡಿಪಿಐಗೆ ಮತ ಬಿದ್ದಿದೆ. ನಾವು ಎಲ್ಲಿ ಎಡವಿದ್ದೇವೆ ಎಂಬುದನ್ನು ಪಕ್ಷದ ಮಟ್ಟದಲ್ಲಿ ಪರಿಶೀಲಿಸುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ದಾವಣಗೆರೆಯಲ್ಲಿ ಒಟ್ಟು 56 ಸಾವಿರ ಮುಸ್ಲಿಮರು ಮತ ಚಲಾಯಿಸಿದ್ದು, ಈ ಪೈಕಿ, ಕಾಂಗ್ರೆಸ್ಗೆ 35 ಸಾವಿರ ಮತ ಬಂದಿದೆ. ನಮ್ಮಲೆಕ್ಕಾಚಾರ ಮೀರಿ, ಎಸ್ಡಿಪಿಐಗೆ ಈ ಬಾರಿ ಹೆಚ್ಚು ಮತ ಬಿದ್ದಿದೆ. ನಮಗೆ ಏಕೆ ಕಡಿಮೆ ಮತ ಬಂದಿವೆ ಎಂದು ವಿಚಾರ ಮಾಡುತ್ತೇವೆ’ ಎಂದರು.
‘ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ 2028ರ ಚುನಾವಣೆಗೆ ದಿಕ್ಕೂಚಿ ಎಂದು ಬಿಜೆಪಿಯವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೇಳುತ್ತಿದ್ದರು. ಈ ಎರಡೂ ಕ್ಷೇತ್ರಗಳನ್ನು ನಾವು ಗೆದ್ದಿದ್ದೇವೆ. ಬಿಜೆಪಿಯವರ ಪ್ರಕಾರ 2028ರಲ್ಲೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದಾಯಿತು’ ಎಂದರು.





