ಉಪ್ಪಿನಂಗಡಿ: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಆಟೋ ರಿಕ್ಷಾಕ್ಕೆ ತೂಫಾನ್ ವಾಹನ ಢಿಕ್ಕಿ: ವೃದ್ಧೆ ಸಾವು, ಚಾಲಕ ಸೇರಿ ಮೂವರಿಗೆ ಗಾಯ
ಉಪ್ಪಿನಂಗಡಿ: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಆಟೋ ರಿಕ್ಷಾಕ್ಕೆ ತೂಫಾನ್ ವಾಹನವೊಂದು ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ವೃದ್ಧೆಯೊಬ್ಬರು ಮೃತಪಟ್ಟು, ಚಾಲಕ ಸೇರಿ ಮೂವರು ಗಾಯಗೊಂಡ ಘಟನೆ ಕೋಣಾಲು ಗ್ರಾಮದ ಕೋಲ್ಪೆ ಎಂಬಲ್ಲಿ ನಡೆದಿದೆ.
ವಿಟ್ಲದ ಮಂಗಲಪದವು ನಿವಾಸಿ ಗಿರಿಜಾ (74) ಮೃತಪಟ್ಟ ದುರ್ದೈವಿ. ವಿಟ್ಲದಿಂದ ಪ್ರಯಾಣಿಸುತ್ತಿದ್ದ ಆಟೋ ಚಾಲಕ ತಿಲಕ್ ರಾಜ್, ಕೋಲ್ಪೆ ಪೆಟ್ರೋಲ್ ಪಂಪ್ ಬಳಿ ನೀರು ಕುಡಿಯಲೆಂದು ರಿಕ್ಷಾವನ್ನು ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದರು. ಈ ವೇಳೆ ಉಪ್ಪಿನಂಗಡಿ ಕಡೆಯಿಂದ ಅತಿವೇಗವಾಗಿ ಬಂದ ತೂಫಾನ್ ವಾಹನವು ರಿಕ್ಷಾಕ್ಕೆ ಹಿಂಬದಿಯಿಂದ ಬಲವಾಗಿ ಢಿಕ್ಕಿ ಹೊಡೆದಿದೆ.
ಢಿಕ್ಕಿಯ ರಭಸಕ್ಕೆ ಆಟೋ ರಿಕ್ಷಾ ರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದಿದೆ. ರಿಕ್ಷಾದಲ್ಲಿದ್ದ ದೀಪಕ್ ಮತ್ತು ಚಾಲಕ ತಿಲಕ್ ರಾಜ್ ಹೊರಕ್ಕೆ ಎಸೆಯಲ್ಪಟ್ಟಿದ್ದು, ಸೋಮಪ್ಪ ಮತ್ತು ಗಿರಿಜಾ ಅವರಿಗೆ ಗಂಭೀರ ಗಾಯಗಳಾಗಿದ್ದವು.
ತಕ್ಷಣವೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಗಿರಿಜಾ ಅವರು ಕೊನೆಯುಸಿರೆಳೆದಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.





