ಶಿವಮೊಗ್ಗ: ಜೋಕಾಲಿಯ ಕುಣಿಕೆ ಕುತ್ತಿಗೆಗೆ ಸಿಲುಕಿ ಬಾಲಕಿ ಮೃತ್ಯು
ಶಿವಮೊಗ್ಗ: ಶಾಲಾ ರಜೆ ಕಳೆಯಲು ಸಂಬಂಧಿಕರ ಮನೆಗೆ ಬಂದಿದ್ದ ಬಾಲಕಿಯೊಬ್ಬಳು ಜೋಕಾಲಿ ಆಟವಾಡುತ್ತಿದ್ದ ಸಂದರ್ಭದಲ್ಲೇ ಪಂಚೆಯ ಕುಣಿಕೆ ಬಿಗಿದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದಲ್ಲಿ ಸಂಭವಿಸಿದೆ.
ಶಿವಮೊಗ್ಗ ನಗರದ ವಿದ್ಯಾನಗರ ನಿವಾಸಿಯಾದ ಪ್ರಣಮ್ಯ (9) ಮೃತಪಟ್ಟ ದುರ್ದೈವಿ. ಸುಮಾರು ಮೂರು ದಿನಗಳ ಹಿಂದೆ ನಡೆದಿದ್ದ ಈ ಕರುಣಾಜನಕ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ.
ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಪ್ರಣಮ್ಯ ಕಳೆದ ಒಂದು ವಾರದ ಹಿಂದೆ ಲಕ್ಕಿನಕೊಪ್ಪದಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ತೆರಳಿದ್ದಳು. ಏಪ್ರಿಲ್ 20ರಂದು ಮನೆಯಲ್ಲಿದ್ದ ಇತರ ಮಕ್ಕಳ ಜೊತೆ ಆಟವಾಡುತ್ತಿದ್ದಾಗ, ಬಾಲಕಿ ಕೋಣೆಗೆ ಹೋಗಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಳು ಎನ್ನಲಾಗಿದೆ.
ಒಂಟಿಯಾಗಿದ್ದ ಬಾಲಕಿ ಕೋಣೆಯ ಒಳಗಡೆ ಪಂಚೆಯೊಂದನ್ನು ಬಳಸಿ ಜೋಕಾಲಿ ಮಾಡಿಕೊಂಡು ಆಟವಾಡಲು ಮುಂದಾಗಿದ್ದಾಳೆ. ಈ ವೇಳೆ ಆಕಸ್ಮಿಕವಾಗಿ ಪಂಚೆಯ ಕುಣಿಕೆ ಕುತ್ತಿಗೆಗೆ ಬಿಗಿದುಕೊಂಡಿದ್ದು, ಉಸಿರಾಟಕ್ಕೆ ತೀವ್ರ ಅಡಚಣೆ ಉಂಟಾಗಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾಳೆ. ಮನೆಯವರು ಬಾಗಿಲು ತೆರೆದು ನೋಡುವಷ್ಟರಲ್ಲಿ ದುರಂತ ಸಂಭವಿಸಿತ್ತು. ಈ ಘಟನೆ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





