ಮತ್ತೆ ವಿವಾದಕ್ಕೆ ಬಂದ ವಿಟ್ಲ ಜಾತ್ರೋತ್ಸವ ಸಂತೆ ಟೆಂಡರ್ ವಿಚಾರ: ಪಟ್ಟಣ ಪಂಚಾಯತ್ ವಿರುದ್ಧ ಗುಡುಗಿದ ಟೆಂಡರ್ ದಾರ ಮಹೇಶ್ ದಾಸ್
ವಿಟ್ಲ: ಏಲಂ ಜಾಗವನ್ನು ಗುರುತು ಹಾಕದೆ ಟೆಂಡರ್ ಮಾಡಲು ಸಾಧ್ಯವಿಲ್ಲ. ಆದರೆ ಜಾತ್ರೆ ಏಲಂ ನಲ್ಲಿ ಜಾಗ ಗುರುತಿಸದೆ, ೪೦ಅಂಗಡಿ ಅಂತ ಟೆಂಡರ್ ನಲ್ಲಿ ಬರೆದಿದ್ದು, ೫೭ ಅಂಗಡಿಯ ಪಟ್ಟಿಯನ್ನು ನೀಡಿದರೂ ೬೭ ಅಂಗಡಿಯ ಹಣ ಪಡೆದುಕೊಂಡಿದ್ದಾರೆ. ಏಲಂ ಪ್ರಕ್ರಿಯೆಯಲ್ಲಿ ಹಲವು ಲೋಪದೋಷಗಳನ್ನು ಹೊಂದಿದ್ದು, ಕೈಯಿಂದ ೪೦ಸಾವಿರ ಹಾಕಿದ್ದೇನೆ ಎಂದು ವಿಟ್ಲ ಜಾತ್ರೋತ್ಸವದ ಸಂತೆ ಟೆಂಡರ್ ಪಡೆದಿದ್ದ ಗುತ್ತಿಗೆದಾರ ಮಹೇಶ್ ದಾಸ್ ಆರೋಪಿಸಿದರು.
ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರೆ ಸಂತೆ ಅಂಗಡಿ ವ್ಯವಹಾರದಲ್ಲಿ ಯಾವುದೇ ಅವ್ಯವಹಾರ ನಡೆಸಿಲ್ಲ. ಎಲ್ಲಾ ದಾಖಲೆಗಳಿದ್ದು, ಪ್ರಕರಣದಲ್ಲಿ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ. ಪಟ್ಟಣ ಪಂಚಾಯಿತಿಯ ಮೂರು ನೋಟೀಸ್ ಗೆ ವಕೀಲರ ಮೂಲಕ ಉತ್ತರ ನೀಡಲಾಗಿದೆ. ಹಾಗೆಂದು ಪಟ್ಟಣ ಪಂಚಾಯಿತಿಗೆ ತಾನು ನೀಡಿದ ದೂರಿನಲ್ಲಿ ಯಾವುದೇ ಕ್ರಮ ಇದುವರೆಗೆ ಆಗಿಲ್ಲ. ನ್ಯಾಯ ಎಲ್ಲರಿಗೂ ಒಂದೇ ಆಗಿರಬೇಕಲ್ವಾ? ಬ್ಲಾಕ್ ಲಿಸ್ಟ್ ಸೇರಿದ ಬಗ್ಗೆ ನಿರ್ಣಯ ಆದರೆ ಎಲ್ಲರ ಮೇಲೆ ದೂರು ದಾಖಲಿಸಲಾಗುವುದು. ಪ್ರತಿಯೊಂದು ಕಡೆಯಲ್ಲಿ ಎರಡು ಸ್ಟಾಲ್ ಹಾಕಿ ವ್ಯಾಪಾರ ನಡೆಸುತ್ತೇನೆ. ಇದರಲ್ಲಿ ಬರುವ ಮೊತ್ತದಲ್ಲಿ ಒಂದನ್ನು ಸಂಘಟನೆಗೆ, ಇನ್ನೊಂದು ವೈಯಕ್ತಿಕಕ್ಕೆ ಬಳಸುತ್ತೇನೆ ಎಂದು ತಿಳಿಸಿದರು.
ವಿಟ್ಲ ಪಟ್ಟಣ ಪಂಚಾಯಿತಿ ಜಾತ್ರೆ ಅಂಗಡಿ ಏಲಂ ನಲ್ಲಿ ಹಲವು ತಪ್ಪುಗಳನ್ನು ಮಾಡಿದ್ದು, ಈಗ ಟೆಂಡರ್ ನಲ್ಲಿ ಸೋತವರ ಜತೆಗೆ ಸೇರಿಕೊಂಡು ನನ್ನ ವಿರುದ್ಧ ಶಡ್ಯಂತ್ರ ರೂಪಿಸುತ್ತಿದ್ದಾರೆ. ಈಗಾಗಲೇ ಇಬ್ಬರ ವಿರುದ್ಧ ದೂರು ನೀಡಿದರೂ ಕ್ರಮ ಆಗಿಲ್ಲ. ವ್ಯಕ್ತಿಗಳಿಗೆ ಹಣ ಪಾವತಿ ಮಾಡಿದ ಹಣದ ವಿಚಾರದ ಹಿಂದೆ ಬಡ್ಡಿ ವ್ಯವಹಾರವಿದ್ದು, ಈ ಬಗ್ಗೆ ಬಂಟ್ವಾಳ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಕಾನೂನು ಪ್ರಕಾರ ಟೆಂಡರ್ ಪಡೆದವರೇ ಬಿಲ್ಲು ಪುಸ್ತಕ ಮಾಡಬೇಕಾಗಿದ್ದು, ಆದರೆ ಜಾತ್ರೆಯ ಅಂಗಡಿಗಳಲ್ಲಿ ಪಂಚಾಯಿತಿಯಂದಲೇ ರಶೀದಿ ಮಾಡಿಕೊಟ್ಟಿದ್ದಾರೆ. ಪ್ರತಿಯೊಂದು ರಶೀದಿಯಲ್ಲಿ ಹೆಸರು ಮೊಬೈಲ್ ಸಂಖ್ಯೆ ಹಾಗೂ ಅಂಗಡಿ ಸಂಖ್ಯೆಯನ್ನು ಪಡೆಯಲಾಗಿದೆ. ಗುತ್ತಿಗೆ ಪಡೆದ ಜಾಗದ ಹೊರಗಿನ ಖಾಸಗೀ ಜಾಗದ ಕಸವನ್ನು ನಾವೇ ಸ್ವಚ್ಛ ಮಾಡಬೇಕಾದ ಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿದರು.
ಪಟ್ಟಣ ಪಂಚಾಯಿತಿಗೆ ೬.೭೦ಲಕ್ಷ ಹಣ ಪಾವತಿ ಮಾಡಲು ಸೂಚಿಸಿದ್ದು, ಜನವರಿ ೧೪ರಿಂದ ೨೩ ನಡುವೆ ವ್ಯಾಪಾರ ನಡೆಸಲು ಅವಕಾಶವನ್ನು ಷರತ್ತಿನಲ್ಲಿ ಹೇಳಿದ್ದರು. ೨೦, ೨೧, ೨೨ರಂದು ರಶೀದಿ ಮೂಲಕ ಅಂಗಡಿಯವರಿಂದ ಹಣವನ್ನು ಪಡೆಯಲಾಗಿದೆ. ಯಾವ ಅಂಗಡಿಯವರಿಂದಲೂ ಹೆಚ್ಚುವರಿ ಹಣ ಪಡೆದಿಲ್ಲ ಎಂಬುದನ್ನು ಎಲ್ಲಿ ಬೇಕಾದರೂ ಪ್ರಮಾಣ ಮಾಡಲು ಸಿದ್ದವಿದ್ದೇನೆ. ಪಟ್ಟಣ ಪಂಚಾಯಿತಿಯಲ್ಲಿ ಬಹಳ ದೊಡ್ಡ ಮಟ್ಟದ ಅವ್ಯವಹಾರ ಆಗಿದ್ದು, ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಉಪವಾಸ ಕೂತಾದರೂ, ಸತ್ಯ ಹೊರತರುತ್ತೇನೆ. ವಿಟ್ಲದ ಜಾತ್ರೆ ಅಂಗಡಿ ಟೆಂಡರ್ ಪ್ರಕರಣದ ಬಗ್ಗೆ ಹೈಕೋರ್ಟ್ ನಲ್ಲಿ ಪ್ರಕರಣ ದಾಖಲಿಸುತ್ತೇನೆ ಎಂದರು.




