ಕರಾವಳಿಯ ಭಜನಾ ತರಬೇತುದಾರ ಪ್ರಕಾಶ್ ಕುಲಾಲ್ ಹೃದಯಘಾತದಿಂದ ಮೃತ್ಯು
ಉಡುಪಿ: ಕರಾವಳಿಯ ಭಜನಾ ತರಬೇತುದಾರ ಪ್ರಕಾಶ್ ಕುಲಾಲ್ (35)ಮಂಗಳವಾರ ತಮ್ಮ ಸ್ವಗೃಹದಲ್ಲಿ ಹೃದಯಘಾತದಿಂದ ನಿಧನರಾದರು.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ನಡೂರು ಗ್ರಾಮದ ನಿವಾಸಿಯಾಗಿರುವ ಪ್ರಕಾಶ್ ಕುಲಾಲ್ ಸೋಮವಾರ ಸಂಜೆ ಭಜನಾ ಕಾರ್ಯಕ್ರಮ ಮುಗಿಸಿ ಮನೆಗೆ ಬಂದು ಮಲಗಿದ್ದರು. ಬೆಳಿಗ್ಗೆ ಅವರಿಗೆ ಆತ್ಮೀಯರೊಬ್ಬರು ಕರೆ ಮಾಡಿದಾಗ ಕರೆ ಸ್ವೀಕರಿಸದಿದ್ದಾಗ ಅನುಮಾನಗೊಂಡು ಮನೆಯ ಮಾಡಿನ ಹಂಚು ತೆಗೆದು ಒಳಗೆ ಹೋಗಿ ನೋಡಿದಾಗ ಪ್ರಕಾಶ್ ಅವರು ಮಲಗಿದ್ದಲ್ಲೇ ಮೃತಪಟ್ಟಿದ್ದರು.
ಪ್ರಕಾಶ್ ಕುಲಾಲ್ ಅತಿದೊಡ್ಡ ಭಜನಾ ಕಾರ್ಯಕ್ರಮಗಳಲ್ಲಿ ಒಂದಾದ ಸಂಕೀರ್ತನ ಮಂದಾರ್ತಿ ಸೇರಿ ಹತ್ತು ಹಲವು ಕಡೆಗಳಲ್ಲಿ ತಮ್ಮನ್ನು ಭಜನೆಗಾಗಿ ಸಮರ್ಪಿಸಿಕೊಂಡ ಯುವಕ. ಯಾವುದೇ ಹಣ ಅಥವಾ ಇತರ ಫಲಾಪೇಕ್ಷೆಗಳಿಲ್ಲದೆ ಭಜನಾ ತರಬೇತಿ ನೀಡುತ್ತಿದ್ದ, ತನ್ನ ಹೆಚ್ಚಿನ ಸಮಯವನ್ನು ಭಜನೆಗಾಗಿ ಮೀಸಲಿಡುತ್ತಿದ್ದರು. ಮೃತರು ಪತ್ನಿ, ಮಗು ಮತ್ತು ಪೋಷಕರನ್ನು ಅಗಲಿದ್ದಾರೆ.




