ಬಂಟ್ವಾಳ: ನೇತ್ರಾವತಿ ನದಿಗೆ ಹಾರಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ
ಬಂಟ್ವಾಳ: ಸರಪಾಡಿಯಲ್ಲಿ ನೇತ್ರಾವತಿ ನದಿಗೆ ಹಾರಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಶನಿವಾರ ನದಿಯಲ್ಲಿ ಪತ್ತೆಯಾಗಿದೆ.
ವಗ್ಗ ಸಮೀಪದ ಕಾಡಬೆಟ್ಟು ನಿವಾಸಿ ಯಶೋಧರ(40) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಆತ ಮಾ. 13ರಂದು ಬೆಳಗ್ಗೆ 6 ಸುಮಾರಿಗೆ ಮನೆಯಿಂದ ಕೆಲಸಕ್ಕೆಂದು ಬಂದಿದ್ದು, ಸರಪಾಡಿ ಬೀದಿಗೆ ಆಗಮಿಸಿ ಬಳಿಕ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸರಪಾಡಿಯ ಹೊಟೇಲೊಂದರಲ್ಲಿ ತಿಂಡಿ ತಿಂದು ಬಳಿಕ ನದಿಯ ಬಳಿಗೆ ಆಗಮಿಸಿದ ಆತ ಮನೆಯಿಂದ ಒಂದು ಜತೆ ಹೆಚ್ಚುವರಿ ಬಟ್ಟೆಯನ್ನು ತಂದು ನದಿಯ ಮೆಟ್ಟಿಲುಗಳ ಬಳಿ ಚಪ್ಪಲಿಯ ಜತೆಗಿಟ್ಟು ನದಿಗೆ ಹಾರಿದ್ದಾನೆ.
ಸ್ಥಳೀಯರು ಯಾರದ್ದೋ ಬಟ್ಟೆಯನ್ನು ನದಿಯ ಕಿನಾರೆಯಲ್ಲಿ ಕಂಡು ಯಾರೋ ನದಿಗೆ ಬಿದ್ದಿರಬಹುದೆಂದು ಸಂಶಯದಿಂದ ಹುಡುಕಾಡಿದರೂ ಆತನ ಸುಳಿವು ಪತ್ತೆಯಾಗಿರಲಿಲ್ಲ. ಶನಿವಾರ ಬೆಳಗ್ಗೆ ದೋಣಿ ನಾವಿಕ ಇಸಾಕ್ ಅವರಿಗೆ ನದಿಯಲ್ಲಿ ಆತನ ಮೃತದೇಹ ಪತ್ತೆಯಾಗಿದ್ದು, ಅವರು ನದಿ ಕಿನಾರೆಗೆ ಎಳೆದುಕೊಂಡು ಬಂದು ಸಂಬಂಧಪಟ್ಟವರಿಗೆ ವಿಚಾರವನ್ನು ತಿಳಿಸಿದ್ದಾರೆ.




