ಚಾಲಕನ ನಿಯಂತ್ರಣ ಕಳೆದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು: ಮಗು ಸಹಿತ ಐದು ಮಂದಿ ಪವಾಡಸದೃಶ ಪಾರು
ವಿಟ್ಲ : ಕೇರಳ ಕಡೆಯಿಂದ ವಿಟ್ಲಕ್ಕೆ ಬರುತ್ತಿದ ಕಾರೊಂದು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಂಬ ಮುರಿದು ಕಾರಿನ ಮೇಲೆ ಬೀಳುತ್ತಲೇ ವಿದ್ಯುತ್ ಪ್ರವಾಹಿಸುತ್ತಿದ್ದ ತಂತಿಗಳು ಮಾರ್ಗದ ಮೇಲೆ ಎಸೆಯಲ್ಪಟ್ಟಿದ್ದರಿಂದ ಕಾರಿನಲ್ಲಿದ್ದ ಎಳೆಯ ಮಗು ಸೇರಿ 5 ಮಂದಿ ಪವಾಡಸದೃಶ್ಯವಾಗಿ ಪಾರಾದ ಘಟನೆ ವಿಟ್ಲ ಉಕ್ಕುಡ ಎಂಬಲ್ಲಿ ಮುಂಜಾನೆ 4 ಗಂಟೆಗೆ ಸಂಭವಿಸಿದೆ.
ಮೂಲತ ಕೊಡುಂಗೈ ನಿವಾಸಿ ಈಗ ಪರ್ತಿಪಾಡಿಯಲ್ಲಿ ವಾಸ್ತವ್ಯವಿರುವ ಚಾಲಕರಾಗಿ ದುಡಿಯುತ್ತಿರುವ ಅಬ್ದುಲ್ಲಾ ಕುಟುಂಬವೇ ಭಾರಿ ರಸ್ತೆ ಅವಘಡದಿಂದ ಬದುಕುಳಿದ ಅದೃಷ್ಟವಂತರು. ಅಬ್ದುಲ್ಲಾ ಅವರ ಮಗಳು ಕೋಝಿಕೋಡ್ನಲ್ಲಿ ಶಿಕ್ಷಕ ವೃತ್ತಿಯ ವ್ಯಾಸಂಗವನ್ನು ಮುಗಿಸಿದ್ದು, ಅವರ ಪ್ರಮಾಣಪತ್ರ ದಾಖಲೆಗಳನ್ನು ಪಡೆದುಕೊಂಡು ಹಿಂತಿರುಗುವಾಗ ಘಟನೆ ನಡೆದಿದೆ.
ಅಬ್ದುಲ್ಲಾ ಅವರ ಪತ್ನಿ ಇಬ್ಬರು ಮಗಳಂದಿರು ಮತ್ತು ಮಗಳ ಮಗು ಸೇರಿ 5 ಜನ ಇದ್ದೆವು, ಸರ್ಟಿಫಿಕೇಟ್ ತೆಗೆದುಕೊಂಡು ಬರುವಾಗ ಕೋಝಿಕೋಡ್ನಲ್ಲಿರುವ ಪವಿತ್ರವಾದ ಮಡವೂರು ದರ್ಗಾಕ್ಕೂ ಹೋಗಿದ್ದೇವು ನಂತರ ಅಲ್ಲಿಂದ ಬರುವಾಗ ತಡವಾಗಿದೆ ಎಂದು ಕಾರು ಚಾಲನೆ ಮಾಡುತ್ತಿದ್ದ ಹಿರಿಯ ಚಾಲಕ ಅಬ್ದುಲ್ಲಾ ತಿಳಿಸಿದ್ದಾರೆ.
ವಿದ್ಯುತ್ ಕಂಬಕ್ಕೆ ನಿಯಂತ್ರಣ ತಪ್ಪಿದ ಸ್ವಿಪ್ಟ್ ಕಾರ್ ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಪ್ರವಹಿಸುತ್ತಿದ್ದ ಕಂಬ ಮುರಿದು ಕಾರಿನ ಮೇಲೆ ಬಿದ್ದಿದೆ. ಕಡಿದುಕೊಂಡ ತಂತಿಗಳು ವಿದ್ಯುತ್ ಕಿಡಿಗಳೊಂದಿಗೆ ಕಾರಿನ ಎಡದಬದಿಯ ಮಾರ್ಗದ ಮೇಲೆ ಎಸೆಯಲ್ಪಟ್ಟಿದೆ. ತಕ್ಷಣ ಕಾರಿನ ಬಲದ ಬದಿಯಿಂದ ಪ್ರಯಾಣಿಕರೆಲ್ಲರೂ ಇಳಿದು ಬಚಾವಾಗಿದ್ದಾರೆ.
ಅಬ್ದುಲ್ಲಾ ಅವರು ಮುಂದೆ ಅನಾಹುತವಾಗದಂತೆ ತಕ್ಷಣಕ್ಕೆ ಲೈನ್ಮ್ಯಾನ್ಗಳಾದ ಪದ್ಮನಾಭ ಮತ್ತು ಚಂದ್ರಹಾಸರವರಿಗೆ ಕರೆ ಮಾಡಿದ್ದು, ತಕ್ಷಣ ಅವರು ಆಗಮಿಸಿ ತಂತಿಯಲ್ಲಿ ಪ್ರವಹಿಸುತ್ತಿದ್ದ ವಿದ್ಯುತ್ನ್ನು ಕಡಿತಗೊಳಿಸಿ ಅಪಾಯವನ್ನು ತಪ್ಪಿಸಿದ್ದಾರೆ.




