ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತವರೂರಲ್ಲಿ ಕೊರಗ ಸಮುದಾಯದ ಮೇಲೆ ಪೋಲಿಸ್ ದೌರ್ಜನ್ಯ: ಪೊಲೀಸರ ಅಮಾನತಿಗೆ ಆಗ್ರಹ
ಕೋಟಾ: ರಾಜ್ಯದ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿರವರ ತವರೂರು ಕೋಟತಟ್ಟು ಬಾರಿಕೆರೆ ಕೊರಗ ಕಾಲನಿಯಲ್ಲಿ ಡಿಸೆಂಬರ್ 27 ರ ರಾತ್ರಿ ಕೋಟ ಕೊರಗ ಸಮುದಾಯದ ಮನೆಯಲ್ಲಿ ನಡೆದ ಮೆಹಂದಿ ಕಾರ್ಯಕ್ರಮಕೆ ಏಕಾಏಕಿ ಕೋಟ ಪೊಲೀಸರು ನುಗ್ಗಿ ಲಾಠಿಚಾರ್ಜ್ ನಡೆಸಿ ದೌರ್ಜನ್ಯ ಎಸಗಿರುವುದು ಅತ್ಯಂತ ಖಂಡನೀಯ. ಇದು ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ತಾಲೂಕು ಸಮಿತಿ ಟೀಕಿಸಿದೆ.
ಕೋಟತಟ್ಟು ಕೊರಗ ಕಾಲನಿಯ ರಾಜೇಶ್ ಎಂಬುವರ ಮೆಹಂದಿ ಕಾರ್ಯಕ್ರಮದಲ್ಲಿ ಡಿಜೆ ಹಾಕಿರುವ ವಿಚಾರದಲ್ಲಿ ಕೋಟ ಪೋಲಿಸರು ಅನಾಗರಿಕರಂತೆ ವರ್ತಿಸುವ ಮೂಲಕ ಮದುಮಗ ಸೇರಿದಂತೆ ಕೊರಗ ಸಮುದಾಯದ ಮೇಲೆ ಲಾಠಿಚಾರ್ಜ್ ಮಾಡಿದ್ದು, ಮಹಿಳಾ ಪೊಲೀಸರ ಅನುಪಸ್ಥಿತಿಯಲ್ಲಿ ಮಹಿಳೆಯರು, ಮಕ್ಕಳ ಮೇಲೆ ಅನಾಗರಿಕರಂತೆ ಧಾಳಿ ನಡೆಸಿದ್ದಾರೆ. ಇದರಿಂದಾಗಿ ಹಲವಾರು ಗಾಯಗೊಂಡಿದ್ದಾರೆ.
ರಾಜ್ಯದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಕಾಲಬುಡದಲ್ಲಿಯೇ ಇಂತಹ ದೌರ್ಜನ್ಯ ನಡೆದರೆ ಇಡೀ ರಾಜ್ಯದ ಗತಿಯೇನು ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ತಾಲೂಕು ಅಧ್ಯಕ್ಷ ವಸಂತ ನಡ, ಕಾರ್ಯದರ್ಶಿ ಜಯಾನಂದ ಪಿಲಿಕಲ, ಸಂಚಾಲಕ ಶೇಖರ್ ಲಾಯಿಲ ಪ್ರಶ್ನಿಸಿದ್ದಾರೆ.
ಅಳಿವಿನಚಿನಲ್ಲಿರುವ ಕೊರಗ ಸಮುದಾಯದ, ಅದರಲ್ಲೂ ಅತ್ಯಂತ ಶೋಷಿತ ಸಮುದಾಯದ ಮೇಲೆ ಪೋಲಿಸರ ದೌರ್ಜನ್ಯ ” ಗುಬ್ಬಚ್ಚಿ ಮೇಲೆ ಬ್ರಹ್ಮಾಶ್ತೃ ಪ್ರಯೋಗ ” ಎಂಬಾಂತಾಗಿದೆ. ಈ ರೀತಿಯ ದೌರ್ಜನ್ಯ ಸಹಿಸಲು ಅಸಾಧ್ಯ. ಅನಾಗರಿಕರಂತೆ ವರ್ಣಿಸಿದ ಕೋಟ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಗಳನ್ನು ತಕ್ಷಣ ಅಮಾನತು ಮಾಡಬೇಕು. ಇಲ್ಲದಿದ್ದರೆ ಇಡೀ ರಾಜ್ಯದಾದ್ಯಂತ ಹಾಗೂ ಕೋಟಾ ಪೋಲಿಸ್ ಠಾಣೆಯ ಎದುರು ಉಗ್ರ ಸ್ವರೂಪದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.




