ಮಂಗಳೂರು: ಕೊರಗಜ್ಜನ ಕಟ್ಟೆಯ ಕಲ್ಲಿನ ಮೇಲೆ ಕಾಂಡೋಮ್ ಇಟ್ಟು ದುಷ್ಕೃತ್ಯ: ಕೋಮುಗಲಭೆಗೆ ಪ್ರಚೋದಿಸುವ ಶಕ್ತಿಗಳನ್ನು ಹೆಡೆಮುರಿ ಕಟ್ಟಿ: ಶಾಸಕ ವೇದವ್ಯಾಸ್ ಕಾಮತ್
ಮಂಗಳೂರು: ನಗರದ ಮಾರ್ನಮಿಕಟ್ಟೆಯ ಬಳಿ ಇರುವ ಕೊರಗಜ್ಜನ ಕಟ್ಟೆಯ ಕಲ್ಲಿನ ಮೇಲೆ ಉಪಯೋಗಿಸಿದ ಕಾಂಡೋಮ್ ಹಾಕಿ ದುಷ್ಕೃತ್ಯ ಮೆರೆದ ಘಟನೆ ಇಂದು ಬೆಳಗ್ಗೆ ಬಳಕಿಗೆ ಬಂದಿದೆ. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಬೆಳಗ್ಗೆ ಭಕ್ತರು ಕಟ್ಟೆಯ ಬಳಿ ಪ್ರಾರ್ಥನೆಗೆ ಬಂದಾಗ ಈ ದುಷ್ಕೃತ್ಯ ಬೆಳಕಿಗೆ ಬಂದಿದೆ. ಕಟ್ಟೆಯ ಬಳಿಯಲ್ಲಿರುವ ಸಿಸಿಟಿವಿಯಲ್ಲಿ ಸೈಕಲ್ನಲ್ಲಿ ಬಂದ ಇಬ್ಬರು ಈ ದುಷ್ಕೃತ್ಯ ಎಸಗಿದ ವೀಡಿಯೋ ರೆಕಾರ್ಡ್ ಆಗಿದ್ದು, ಘಟನೆ ಬಗ್ಗೆ ಸುದ್ದಿ ಹಬ್ಬುತ್ತಿದ್ದಂತೆ ಸಂಘಟನೆಯ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಸಿಸಿಟಿವಿ ದಾಖಲೆ ವಶಪಡಿಸಿಕೊಂಡಿದ್ದು, ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಪ್ಪಿತಸ್ಥರನ್ನು ಶೀಘ್ರ ಬಂಧಿಸುವಂತೆ ಇಲಾಖೆಗೆ ಸೂಚನೆ
ಸ್ಥಳೀಯ ಶಾಸಕ ವೇದವ್ಯಾಸ್ ಕಾಮತ್ ಘಟನೆಯನ್ನು ಖಂಡಿಸಿದ್ದು, ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕ್ರಮ ಜರಗಿಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿ, ಧಾರ್ಮಿಕ ಕೇಂದ್ರಗಳನ್ನು ಅಪವಿತ್ರಗೊಳಿಸುವ ಯಾರೇ ಆದರೂ ಕಠಿಣ ಕ್ರಮ ಜರಗಿಸಲಾಗುತ್ತದೆ.
ಶಾಂತಿಯುತವಾಗಿರುವ ಕರಾವಳಿಯನ್ನು ಇಂತಹ ಕೃತ್ಯಗಳ ಮೂಲಕ ಕೋಮುಗಲಭೆಗೆ ಪ್ರಚೋದಿಸುವ ಶಕ್ತಿಗಳನ್ನು ಹೆಡೆಮುರಿ ಕಟ್ಟಲು ಪೋಲಿಸ್ ಇಲಾಖೆಗೆ ಸೂಚನೆ ನೀಡಿದ್ದೇನೆ.
ಪ್ರಶಾಂತವಾಗಿರುವ ಕರಾವಳಿಯಲ್ಲಿ ಕೋಮುಗಲಭೆ ಎಬ್ಬಿಸಲು ಪ್ರಯತ್ನಿಸಿದರೆ ಅದನ್ನು ಕಂಡು ಸುಮ್ಮನೆ ಇರಲಾಗದು. ಕಳೆದ 4 ವರ್ಷಗಳಲ್ಲಿ ಕೋಮುಗಲಭೆಗಳು ನಡೆದಿಲ್ಲ ಮುಂದೆಯೂ ಕೂಡ ಅದಕ್ಕೆ ಆಸ್ಪದ ನೀಡುವುದಿಲ್ಲ ಎಂದು ಹೇಳಿದ್ದಾರೆ.





