ವಿಟ್ಲ: ಬೆಂಕಿ ಅವಘಡದಿಂದ ಕೋಟ್ಯಾಂತರ ರೂ. ನಷ್ಟ: ಸುಮಾರು 5ರಷ್ಟು ಅಂಗಡಿ, ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ
ವಿಟ್ಲ: ಇಲ್ಲಿನ ಮಂಗಳೂರು ರಸ್ತೆಯಲ್ಲಿರುವ ಇಲೆಕ್ಟ್ರಾನಿಕ್ಸ್ ಅಂಗಡಿಯೊಂದರಲ್ಲಿ ಬುಧವಾರ ಆಕಸ್ಮಿಕವಾಗಿ ಕಾಣಿಸಿಕೊಂಡ ಭೀಕರ ಬೆಂಕಿಯು ಕ್ಷಣಾರ್ಧದಲ್ಲಿ ಅಕ್ಕಪಕ್ಕದ ಮಳಿಗೆಗಳಿಗೂ ವ್ಯಾಪಿಸಿದ್ದು, ಕೋಟ್ಯಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.
ಸಂತೋಷ್ ಕುಮಾರ್ ಕೊಡಂಗೆ ಅವರ ಮಾಲೀಕತ್ವದ ಇಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಅಂಗಡಿಯೊಳಗಿದ್ದ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಸುಲಭವಾಗಿ ಬೆಂಕಿ ಹತ್ತಿಕೊಳ್ಳುವ ವಸ್ತುಗಳಿಂದಾಗಿ ಜ್ವಾಲೆಯ ತೀವ್ರತೆ ಏಕಾಏಕಿ ಹೆಚ್ಚಾಗಿದೆ. ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ನಿಯಂತ್ರಣಕ್ಕೆ ಬಾರದ ಮಟ್ಟಿಗೆ ಅಗ್ನಿಶಾಮಕ ಜ್ವಾಲೆ ಅಬ್ಬರಿಸಿದೆ.
ಇಲೆಕ್ಟ್ರಾನಿಕ್ಸ್ ಅಂಗಡಿಯಿಂದ ಹಬ್ಬಿದ ಬೆಂಕಿ ಪಕ್ಕದಲ್ಲೇ ಇದ್ದ ಸಣ್ಣಪುಟ್ಟ ಅಂಗಡಿಗಳನ್ನು ಆವೇಶಭರಿತ ಪಡೆದಿದೆ.
ಸದ್ಯ ಬೆಂಕಿಯ ಕೆನ್ನಾಲಗೆಯು ಸಮೀಪದ ಅಮಿತ್ ಹೋಟೆಲ್ ವರೆಗೂ ವಿಸ್ತರಿಸಿದ್ದು, ಹೋಟೆಲ್ ಮತ್ತು ಇತರ ಮಳಿಗೆಗಳಿಗೂ ಭಾರೀ ಹಾನಿಯಾಗಿದೆ ಎಂದು ವರದಿಯಾಗಿದೆ.
ಬಳಿಕ ಬೆಂಕಿ ಸ್ಟಾರ್ ವೈನ್ಸ್ ವರೆಗೂ ವಿಸ್ತರಣೆಯಾಗಿದ್ದು, ಇದರ ನಡುವೆ ಇದ್ದ ಎಸ್. ಬಿ. ಟೈಲರಿಂಗ್ ಶಾಪ್, ಪಡೀಲ್ ಪಾಸ್ಟ್ ಫುಡ್, ಸಹಿತ ಸಣ್ಣ ಅಂಗಡಿಗಳೂ ಬೆಂಕಿಗೆ ಆಹುತಿಯಾಗಿದೆ. ಬಂಟ್ವಾಳದಿಂದ ಅಗ್ನಿಶಾಮಕ ವಾಹನ ಬಂದಿದ್ದು, ಬೆಂಕಿ ನಿಯಂತ್ರಣಕ್ಕೆ ಬರುತ್ತಿಲ್ಲ. ಬೆಂಕಿಯ ರೌದ್ರಾವತಾರಕ್ಕೆ ಸಿಲುಕಿ ಹಲವು ಅಂಗಡಿಗಳು ಸಂಪೂರ್ಣ ಭಸ್ಮವಾಗಿವೆ.
ಅಗ್ನಿಶಾಮಕದಳ ದೌಡು:
ವಿಷಯ ತಿಳಿಯುತ್ತಿದ್ದಂತೆಯೇ ಪುತ್ತೂರು ಮತ್ತು ಬಂಟ್ವಾಳದಿಂದ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಆದರೆ, ಬೆಂಕಿಯ ತೀವ್ರತೆ ಅತಿಯಾಗಿರುವುದರಿಂದ ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ. ಅಗ್ನಿಶಾಮಕ ಸಿಬ್ಬಂದಿಗಳು ಮತ್ತು ಸ್ಥಳೀಯರು ಬೆಂಕಿಯನ್ನು ಹತೋಟಿಗೆ ತರಲು ಹರಸಾಹಸಪಟ್ಟರು. ಶಾರ್ಟ್ ಸರ್ಕ್ಯೂಟ್ ನಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.




