ಉಪ್ಪಿನಂಗಡಿ: ನದಿಯಲ್ಲಿ ಮೀನು ಹಿಡಿಯುತ್ತಿದ್ದ ಬೇಸ್ತರನ್ನು ತೆರವುಗೊಳಿಸಿದ ಗ್ರಾಮ ಪಂಚಾಯತ್
ಉಪ್ಪಿನಂಗಡಿ: ಇಲ್ಲಿನ ಕುಮಾರಧಾರ ಸೇತುವೆಯ ಬಳಿ ಠಿಕಾಣಿ ಹೂಡಿ ನದಿಯಲ್ಲಿ ಮೀನು ಹಿಡಿಯುತ್ತಿದ್ದ ಹೊರ ಜಿಲ್ಲೆಯ ತಂಡವನ್ನು ಉಪ್ಪಿನಂಗಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿಲೈಡ್ ಲಾರೆನ್ಸ್ ರೊಡ್ರಿಗಸ್ ಅವರು ನ.6ರಂದು ತೆರವುಗೊಳಿಸಿದ್ದು ಉಪ್ಪಿನಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನದಿಯಲ್ಲಿ ಮೀನು ಹಿಡಿಯಬಾರದೆಂದು ಸೂಚನೆ ನೀಡಿದ್ದಾರೆ.
ನೇತ್ರಾವತಿ- ಕುಮಾರಧಾರ ನದಿಗಳಲ್ಲಿ ಈ ಹಿಂದೆ ಹಲವು ಜಾತಿಯ ಮತ್ರ್ಯಸಂಪತ್ತು ಹೇರಳವಾಗಿತ್ತು. ಆದರೆ ಗಾಳ ಹಾಕುವುದು, ಬಲೆ ಬೀಸುವುದು, ರಾತ್ರಿ ಹೊತ್ತು ದೋಣಿಯಲ್ಲಿ ತೆರಳಿ ಕಾರ್ಬೆಟ್ ಉಪಯೋಗಿಸಿ ಮೀನು ಹಿಡಿಯುವುದು ಸ್ಥಳೀಯ ಕೆಲವರಿಂದ ನಿರಂತರ ನಡೆಯುತ್ತಿತ್ತು.
ಇನ್ನೊಂದೆಡೆ ವರ್ಷಂಪ್ರತಿ ನಾಲೈದು ಬೆಸ್ತ ಕುಟುಂಬಗಳು ಬೇರೆ ಜಿಲ್ಲೆಗಳಿಂದ ಇಲ್ಲಿಗೆ ಬಂದು ನದಿ ದಡದಲ್ಲೇ ಠಿಕಾಣಿ ಹೂಡಿ ತೆಪ್ಪದ ಮೂಲಕ ಬಲೆ ಹಾಕಿ ದಿನಂಪ್ರತಿ ಬುಟ್ಟಿ ಬುಟ್ಟಿ ಮೀನುಗಳನ್ನು ಹಿಡಿದು ಪೇಟೆಯಲ್ಲಿ ಮಾರಾಟ ಮಾಡುವ ಕಾಯಕ ನಡೆಸುತ್ತಿತ್ತು. ಇದರಿಂದ ಮತ್ರ್ಯಸಂಪತ್ತು ನಾಶವಾಗಿ ನದಿಯು ಮಲಿನಗೊಳ್ಳಲು ಹೆಚ್ಚು ಕಾರಣವಾಗಿತ್ತು. ಇವರು ಹೆಚ್ಚಿನ ಪ್ರಮಾಣದಲ್ಲಿ ಮೀನನ್ನು ಹಿಡಿಯಲು ರಾಸಾಯನಿಕ ಪದಾರ್ಥಗಳನ್ನು ಬಳಸುತ್ತಾರೆಂಬ ಆರೋಪವೂ ಕೇಳಿ ಬರುತ್ತಿತ್ತು. ಈ ನಿಟ್ಟಿನಲ್ಲಿ ಗ್ರಾ.ಪಂ. ಇವರನ್ನು ಇಲ್ಲಿಂದ ತೆರವುಗೊಳಿಸಿದೆ.




