ಮೇವು ತರಲು ಹೊಲಕ್ಕೆ ಹೋದ ತಾಯಿ, ಮಗು ಹೊಂಡದಲ್ಲಿ ಶವವಾಗಿ ಪತ್ತೆ
ಕೋಲಾರ: ಮೇವು ತರಲು ಹೊಲಕ್ಕೆ ಹೋಗಿದ್ದ ತಾಯಿ-ಮಗು ಹೊಂಡದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕೋಲಾರ ತಾಲೂಕು ಹೊಗರಿಗೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೊಗರಿಗೊಲ್ಲಹಳ್ಳಿ ಗ್ರಾಮದ ಗಾರೆ ಕೆಲಸ ಮಾಡುವ ಮಂಜುನಾಥ್ ಎಂಬುವರ ಪತ್ನಿ ಮಾಲಾ (35), ಚಕ್ರವರ್ತಿ (5) ಮೃತ ದುರ್ದೈವಿಗಳು. ಮಾಲಾ ಎಂದಿನಂತೆ ತನ್ನ ಮಗ ಚಕ್ರವರ್ತಿ ಅಂಗನವಾಡಿ ಶಾಲೆ ಅವಧಿ ಮುಗಿದ ಮೇಲೆ ಆತನನ್ನು ಕರೆದುಕೊಂಡು ಹೊಲಕ್ಕೆ ಹೋಗಿ ಹಸುಗಳಿಗೆ ಮೇವು ತಂದು ಹಾಕೋದು ಹೊಲದಲ್ಲಿ ಕೆಲಸ ಮಾಡೋದು ಮಾಡುತ್ತಿದ್ದರು. ಅದರಂತೆ ಶನಿವಾರವೂ ಕೂಡಾ ಅಂಗನವಾಡಿ ಮುಗಿದ ಮೇಲೆ ಮಗನನ್ನು ಕರೆದುಕೊಂಡು ಹೊಲಕ್ಕೆ ಹೋಗಿದ್ದಾರೆ.
ಹೊಲಕ್ಕೆ ಹೋದವರು ರಾತ್ರಿಯಾದರೂ ವಾಪಸ್ ಬಂದಿಲ್ಲ. ಕುಟುಂಬಸ್ಥರು ಅವರಿಗಾಗಿ ರಾತ್ರಿಯೆಲ್ಲಾ ಹುಡುಕಾಡಿದ್ದಾರೆ. ಆದರೆ ಇಬ್ಬರು ಪತ್ತೆಯಾಗಿಲ್ಲ. ಇನ್ನು ಬೆಳಿಗ್ಗೆ ಎದ್ದು ಹೊಲದ ಬಳಿ ನೋಡಿದ್ರೆ ಮಾಲಾ ಹಾಗೂ ಮಗು ಇಬ್ಬರೂ ಹೊಲದಲ್ಲಿದ್ದ ಕೃಷಿಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಇನ್ನೂ ಮಾಲಾ ಹಾಗೂ ಮಂಜುನಾಥ್ ಅವರಿಗೆ ಮದುವೆಯಾಗಿ ಏಳು ವರ್ಷ ಕಳೆದಿದ್ದು, ಇಬ್ಬರಿಗೂ ಚಕ್ರವರ್ತಿ ಅನ್ನೋ ಒಂದು ಗಂಡು ಮಗುವಿದೆ. ಬೆಳಿಗ್ಗೆ ಎದ್ದು ಗಾರೆ ಕೆಲಸಕ್ಕೆ ಮಂಜುನಾಥ್ ಹೋದರೆ ಮಾಲಾ ಮಗನನ್ನು ನೋಡಿಕೊಂಡು ಹೊಲಕ್ಕೆ ಹೋಗಿ ಅಲ್ಲಿ ಹಸುಗಳಿಗೆ ಮೇವು ತರೋದು ಮಾಡುತ್ತಿದ್ದರು. ಅದರಂತೆ ನಿನ್ನೆಯೂ ಕೂಡಾ ಹೊಲಕ್ಕೆ ಹೋದವರು ರಾತ್ರಿ ಇಡೀ ನಾಪತ್ತೆಯಾಗಿ ಬೆಳಿಗ್ಗೆ ಹೊತ್ತಿಗೆ ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮಗು ಚಕ್ರವರ್ತಿ ನೀರಿಗೆ ಬಿದಿದ್ದು ಆತನನ್ನು ರಕ್ಷಣೆ ಮಾಡಲು ಹೋಗಿ ತಾಯಿ ಮಾಲಾ ಕೂಡಾ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದೆ. ಸದ್ಯ ಘಟನೆ ಸಂಬಂಧ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕುಟುಂಬದಲ್ಲಾಗಲಿ, ಗಂಡ ಹೆಂಡತಿಯ ನಡುವೆಯಾಗಲೀ ಯಾವುದೇ ವೈಮನಸ್ಸು ಇರಲಿಲ್ಲ ಎನ್ನಲಾಗಿದೆ. ಇದೊಂದು ಆಕಸ್ಮಿಕ ಘಟನೆ ಎನ್ನಲಾಗಿದೆ.




