ತಲಪಾಡಿ: ಖಾಸಗಿ ಫಾರ್ಮ್ ನಲ್ಲಿ ಅಸ್ಥಿಪಂಜರ ಪತ್ತೆ
ಉಳ್ಳಾಲ: ತಲಪಾಡಿ ಸಮೀಪದ ದೇವಿಪುರ ರಸ್ತೆಯ ಅಕ್ಷಯ ಫಾರ್ಮ್ನ ಪೊದೆಗಳಲ್ಲಿ ಅಪರಿಚಿತ ಮೃತದೇಹದ ಕಳೇಬರ ಪತ್ತೆಯಾಗಿದ್ದು, ಇದು ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ ಬಿಹಾರ ಮೂಲದ ವಲಸೆ ಕಾರ್ಮಿಕನ ಮೃತದೇಹದ ಅಸ್ತಿಪಂಜರ ಎಂದು ಶಂಕಿಸಲಾಗಿದೆ.
ಲುಂಗಿಯೊಂದು ಮರದಲ್ಲಿ ಕಟ್ಟಿರುವ ಸ್ಥಿತಿಯಲ್ಲಿರುವುದರಿಂದ ನೇಣು ಬಿಗಿದು ಸತ್ತಿರುವ ಶಂಕೆಯಿದೆ. ಸ್ಥಳದಲ್ಲಿ ಸಿಕ್ಕ ಮೊಬೈಲ್ ಸಿಮ್ ಆಧಾರದಡಿ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ ವಲಸೆ ಕಾರ್ಮಿಕನಾಗಿರುವ ಶಂಕೆಯಿದೆ. ಎಫ್ಎಸ್ಎಲ್ ವರದಿ ಬಳಿಕ ದೃಢವಾಗಲಿದೆ. ಮರಕ್ಕೆ ಕಟ್ಟಿರುವ ಲುಂಗಿಯನ್ನು ಆಧರಿಸಿ ಇದೊಂದು ಕೊಲೆ ನಡೆಸಿ ನೇತು ಹಾಕಿದ್ದಾರೆಂಬ ಶಂಕೆಯೂ ವ್ಯಕ್ತವಾಗಿದೆ.
ಮಂಜೇಶ್ವರ ಠಾಣಾ ವ್ಯಾಪ್ತಿಯ ಕುಂಜತ್ತೂರಿನ ಫರ್ನಿಚರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ರಾಹುಲ್ ಕುಮಾರ್(17) ಆ.7 ರಂದು ನಾಪತ್ತೆಯಾಗಿದ್ದರು. ಈ ಕುರಿತು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಸ್ಥಳದಲ್ಲಿ ಹಸಿರು ಕಲರ್ ನ ಬರ್ಮುಡ ಚಡ್ಡಿ,ಹಸಿರು ಟೀ ಶರ್ಟ್ ಪತ್ತೆಯಾಗಿದ್ದು ಮೇಲ್ನೋಟಕ್ಕೆ ಅದು ಗಂಡಸಿನ ದೇಹದ ಅವಶೇಷಗಳಂತೆ ಕಾಣುತ್ತಿತ್ತು.ಮರದ ಗೆಲ್ಲಲ್ಲಿ ನೈಲಾನ್ ಹಗ್ಗದ ನೇಣಿನ ಕುಣಿಕೆ ಇದ್ದು ಅದರಲ್ಲಿ ಹೆಡ್ ಫೋನ್ ಮತ್ತು ಎಲುಬುಗಳು ನೇತಾಡುತ್ತಿತ್ತು. ಬರ್ಮುಡ ಚಡ್ಡಿಯಲ್ಲಿ ಮೊಬೈಲ್ ಫೋನ್ ಕೂಡ ಪತ್ತೆಯಾಗಿತ್ತು.




