ಧರ್ಮಸ್ಥಳ ಪ್ರಕರಣ: ನೇತ್ರಾವತಿ ಸ್ನಾನಘಟ್ಟದಲ್ಲಿ ಸೌಜನ್ಯ ಮಾವನೊಂದಿಗೆ ಸ್ಥಳ ಮಹಜರು ನಡೆಸಿದ SIT ತಂಡ
ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣ ಸ್ಫೋಟಕ ತಿರುವು ಪಡೆದುಕೊಂಡಿದ್ದು, ತಲೆ ಬುರುಡೆ ರಹಸ್ಯ ಇದೀಗ ಬಹಿರಂಗಗೊಂಡಿದೆ. ದೂರುದಾರ-ಸಾಕ್ಷಿ ಚಿನ್ನಯ್ಯನಿಗೆ ತಲೆಬುರುಡೆ ತಂದುಕೊಟ್ಟಿದ್ದು ಸೌಜನ್ಯ ಮಾವ ವಿಠಲ್ ಗೌಡ ಎಂಬುದು ಬಹಿರಂಗಗೊಂಡಿದೆ. ಈ ಪ್ರಕರಣದಲ್ಲಿ ಬುರುಡೆಯನ್ನು ಮೊದಲು ಕಾಡಿನಿಂದ ತಂದಿರುವುದು ಸೌಜನ್ಯ ಮಾವ ವಿಠಲ್ ಗೌಡ ಎಂದು ಎಸ್.ಐ.ಟಿ ವಿಚಾರಣೆಯಲ್ಲಿ ಬಯಲಾಗಿದೆ.
ಈ ಹಿನ್ನೆಲೆಯಲ್ಲಿ ಶನಿವಾರ ರಾತ್ರಿಯ ವೇಳೆ ನೇತ್ರಾವತಿ ಸ್ನಾನಘಟ್ಟದಲ್ಲಿ ವಿಠಲಗೌಡ ಅವರೊಂದಿಗೆ ಆಗಮಿಸಿದ ಎಸ್.ಐ.ಟಿ ತಂಡ ಸ್ಥಳಮಹಜರು ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ವಿಠಲ್ ಗೌಡ ಮೊದಲು ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟದಲ್ಲಿರುವ ಬಂಗ್ಲಗುಡ್ಡೆ ಕಾಡಿನಿಂದ ಬುರುಡೆ ಯನ್ನು ತಂದು ನೀಡಿದ್ದು, ಅದನ್ನು ಚಿನ್ನಯ್ಯನಿಗೆ ಒಪ್ಪಿಸಿರುವುದು ಎಸ್.ಐ.ಟಿ ತನಿಖೆಯಲ್ಲಿ ಬಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.





