ಬೆಳ್ತಂಗಡಿ: ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ಹಲವರ ಮೇಲೆ ಮತ್ತೊಂದು FIR ದಾಖಲು
ಬೆಳ್ತಂಗಡಿ: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಅಡಿ ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ಹಲವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್ಐಅರ್ ದಾಖಲಾಗಿದೆ.
ಗುರುವಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನ ಮಾಡಲು ಬ್ರಹ್ಮಾವರ ಪೊಲೀಸರು ತಿಮರೋಡಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಗಿರೀಶ್ ಮಟ್ಟಣ್ಣನವರ್, ಜಯಂತ್ ಮತ್ತು ಇತರರು ಪೊಲೀಸರಿಗೆ ಅಡ್ಡಿ ಪಡಿಸಿದ್ದರು. ಈ ಕಾರಣಕ್ಕೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ದಾಖಲಾದ ನಂತರ ವಿಚಾರಣೆಗೆ ಹಾಜರಾಗಲು ಬೆಳ್ತಂಗಡಿ ಎಸ್ಐಟಿ ಠಾಣೆಗೆ ಗಿರೀಶ್ ಮಟ್ಟಣ್ಣನವರ್ ಆಗಮಿಸಿದ್ದರು. ಕೆಲ ಕಾಲ ಪೊಲೀಸರು ವಿಚಾರಣೆ ನಡೆಸಿ ಮಟ್ಟಣ್ಣನವರ್ ಅವರನ್ನು ಬಿಟ್ಟು ಕಳುಹಿಸಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮಗೆ ಕೋರ್ಟ್, ಸ್ಟೇಷನ್ ಬೀಗರ ಮನೆಯಾಗಿದೆ. ನಿನ್ನೆ ತಿಮರೋಡಿ ಬಂಧನಕ್ಕೆ100 ಜನ ಪೊಲೀಸರು ಬಂದಿದ್ದರು. ಮನೆಯವರು ಏಕೆ ಬಂದಿದ್ದೀರಾ ಅಂತ ಕೇಳಿದ್ದಾರೆ ಅಷ್ಟೇ. ನಾವು ಯಾರೂ ಪೊಲೀಸರಿಗೆ ಅಡ್ಡಿ ಮಾಡಿಲ್ಲ ಎಂದು ತಿಳಿಸಿದರು.
ಇವತ್ತು 30 ಜನರ ಮೇಲೆ ಕೇಸ್ ಅಂತ ಸುದ್ದಿ ಬಂದಿದೆ. ನಾನು ಕೇಳಲು ಬಂದಿದ್ದೇನೆ, ಬಂಧನ ಮಾಡೋದಾದ್ರೆ ಮಾಡಲಿ. ಸುಮ್ಮನೆ, ಪೆಟ್ರೋಲ್ ಡಿಸೇಲ್ ಏಕೆ ಖರ್ಚು ಮಾಡಬೇಕು? ನಾನೇ ಬಂದಿದ್ದೇನೆ ಅರೆಸ್ಟ್ ಮಾಡೋದಾದ್ರೆ ಮಾಡಲಿ ಎಂದರು.
ನಿನ್ನೆ ಬೆಳಗ್ಗೆ ಠಾಣೆಗೆ ಹೊರಟಿದ್ವಿ, ತಕ್ಷಣ ಮನೆಗೆ ಬಂದು ಅರೆಸ್ಟ್ ಮಾಡಿದ್ದಾರೆ. ಅದೇ ಸಮಯಕ್ಕೆ ಸಮೀರ್ ಮನೆಯನ್ನೂ ಸುತ್ತುವರಿದಿದ್ದಾರೆ. ಬೇಲ್ ಆಗಿದ್ದಕ್ಕೆ ವಾಪಸ್ ಬಂದಿದ್ದಾರೆ. ಇಲ್ಲದೇ ಇದ್ದರೆ ಸಮೀರ್ ಅರೆಸ್ಟ್ ಆಗುತ್ತಿದ್ದರು. ನಮ್ಮನ್ನ ಭಯಪಡಿಸಲು ಮುಂದಾಗಿದ್ದಾರೆ. ನಮ್ಮ ಮೇಲೆ ಕೇಸ್ ಆಗಿದ್ದು ನಾವೂ ಎಲ್ಲಿಯೂ ಓಡಿಹೋಗುವುದಿಲ್ಲ ಎಂದು ಹೇಳಿದರು.
ನಾಲ್ಕು ಫೇಕ್ ಕೇಸ್ಗೆ ಸಂಬಂಧಿಸಿದಂತೆ ನಾಲ್ಕೂವರೆ ಗಂಟೆ ನಿರಂತರ ವಿಚಾರಣೆ ಮಾಡಿದ್ದಾರೆ. ನನ್ನ ಮೇಲೆ 20ಕ್ಕೂ ಹೆಚ್ಚು ಕೇಸ್ ದಾಖಲಾಗಿವೆ. ಅರೆಸ್ಟ್ ಮಾಡೋದಾದ್ರೆ ಮಾಡಲಿ ಅದಕ್ಕೆ ನಾನೇ ಠಾಣೆಗೆ ಬಂದಿದ್ದೆ ಎಂದು ತಿಳಿಸಿದ್ದಾರೆ.




