ದೆವ್ವ ಬಿಡಿಸುವುದಾಗಿ ಹೇಳಿ ಮನಸೋ ಇಚ್ಛೆ ಥಳಿತ: ಮಹಿಳೆ ಮೃತ್ಯು
ಶಿವಮೊಗ್ಗ: ದೆವ್ವ ಬಿಡಿಸುವುದಾಗಿ ಹೇಳಿ ಮಹಿಳೆಯೊಬ್ಬರನ್ನು ಮನಸೋ ಇಚ್ಛೆ ಥಳಿಸಿ ಕೊಂದಿರುವ ಘಟನೆ ಹೊಳೆಹೊನ್ನೂರು ಸಮೀಪದ ಜಂಬರಗಟ್ಟೆಯಲ್ಲಿ ರಾತ್ರಿ ನಡೆದಿದೆ.
ಹೊಸ ಜಂಬರಘಟ್ಟೆ ಗ್ರಾಮದ ಗೀತಮ್ಮ (55) ಮೃತ ಮಹಿಳೆ. ಕಳೆದ 15 ದಿನಗಳಿಂದ ಅಸ್ವಸ್ಥರಾಗಿದ್ದ ಗೀತಮ್ಮ ಅವರನ್ನು ಅವರ ಮಗ ಸಂಜಯ್, ಆಶಾ (45) ಎಂಬ ಮಹಿಳೆಯ ಬಳಿಗೆ ಕರೆದೊಯ್ದಿದ್ದಾರೆ.
ಮಹಿಳೆ ಆ ಪ್ರದೇಶದಲ್ಲಿ ಭೂತ ಬಿಡಿಸುವ ಕೆಲಸ ಮಾಡುತ್ತಾಳೆಂದು ಹೆಸರುವಾಸಿಯಾಗಿದ್ದಳು ಎನ್ನಲಾಗಿದೆ. ಗೀತಮ್ಮಗೆ ದೆವ್ವ ಹಿಡಿದಿದೆ ಎಂದು ಆಶಾ ಹೇಳಿಕೊಂಡಿದ್ದು, ಆರೋಪಿ ಮೃತ ಗೀತಮ್ಮಳನ್ನು ಭಾನುವಾರ ರಾತ್ರಿ 9.30ರಿಂದ ಸೋಮವಾರ ಬೆಳಗಿನ ಜಾವ 1.30 ರವರೆಗೂ ಹಳೇ ಜಂಭರಘಟ್ಟೆ ಚೌಡಮ್ಮನ ದೇವಸ್ಥಾನದವರೆಗೂ ದೆವ್ವ ಬಿಟ್ಟಿಲ್ಲ ಎಂದು ಹೊಡೆದುಕೊಂಡು ಬಂದಿದ್ದಾಳೆ.
ತಲೆ ಮೇಲೆ ಕಲ್ಲು ಹೊರಿಸಿ ಮರವೊಂದರ ಕೆಳಗೆ ಪೂಜೆ ಮಾಡಿದ ಕೆಲ ಹೊತ್ತಲ್ಲೆ ಗೀತಮ್ಮಳ ಕೂಗಾಡಲು ಶುರು ಮಾಡಿದ್ದಾರೆ. ಬಳಿಕ ಕಾಲುವೆಯಲ್ಲಿದ್ದ ತಣ್ಣೀರೆರಚಿದ್ದಾರೆ. ಈ ವೇಳೆ ಗೀತಮ್ಮ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಬಳಿಕ ದೆವ್ವ ಬಿಟ್ಟಿದೆ. ಮನೆಗೆ ಕರೆದುಕೊಂಡು ಹೋಗು ಎಂದು ಸೂಚಿಸಿದ್ದಾಳೆ.




