ನೆಲ್ಯಾಡಿ: ಯುವಕನ ಕೊಲೆ ಪ್ರಕರಣ: ಅರೋಪಿ ಚಿಕ್ಕಪ್ಪನ ಮಗ ಬಂಧನ
ನೆಲ್ಯಾಡಿ: ಕಟ್ಟಿಗೆ ಕೊಂಡೊಯ್ಯುವ ವಿಷಯದಲ್ಲಿ ಜಗಳ ನಡೆದು ತನ್ನ ದೊಡ್ಡಪ್ಪನ ಮಗನನ್ನೇ ದೊಣ್ಣೆಯಿಂದ ಹೊಡೆದು ಹತ್ಯೆಗೈದ ಘಟನೆ ನೆಲ್ಯಾಡಿ ಗ್ರಾಮದ ಮಾದೇರಿ ಎಂಬಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿ ಹರಿಪ್ರಸಾದ್ ನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಮಾದೇರಿ ನಿವಾಸಿ ಗಂಗಪ್ಪ ಗೌಡ ಅವರ ಪುತ್ರ ಶರತ್ ಕುಮಾರ್ (37) ಮೃತ ಯುವಕ. ಮೃತ ಯುವಕನ ಚಿಕ್ಕಪ್ಪ ದಿ.ಜನಾರ್ದನ ಗೌಡರ ಮಗ ಹರಿಪ್ರಸಾದ್ ಕೊಲೆ ಆರೋಪಿ.
ಶುಕ್ರವಾರ ರಾತ್ರಿ ಕೊಲೆ ಕೃತ್ಯ ನಡೆದಿದ್ದು, ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಚಿಕ್ಕಪ್ಪನ ಮನೆಮಂದಿ ಯೊಂದಿಗೆ ಸಂಘರ್ಷನಿರತನಾಗಿದ್ದ ಶರತ್ ಕುಮಾರ್ ನನ್ನು ಆತನ ಚಿಕ್ಕಪ್ಪನ ಮನೆಯಂಗಳದಲ್ಲಿಯೇ ಹೊಡೆದು ಕೊಲ್ಲಲಾಗಿತ್ತು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪೆರಿಯಶಾಂತಿಯಲ್ಲಿದ್ದ ಆರೋಪಿ ಹರಿಪ್ರಸಾದ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.




