ಮಂಗಳೂರು: ಹತ್ಯೆಯಾದ ಸುಹಾಸ್ ಶೆಟ್ಟಿ ಅಂತಿಮ ದರ್ಶನ ಪಡೆದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್. ಆಶೋಕ್
ಮಂಗಳೂರು: ಬಜಪೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾಗಿರುವ ಸುಹಾಸ್ ಶೆಟ್ಟಿ ಮೃತದೇಹವನ್ನು ಮೆರವಣಿಗೆಯಲ್ಲಿ ಅವರ ಊರು ಬಂಟ್ವಾಳ ತಾಲ್ಲೂಕಿನ ಕಾರಿಂಜಕ್ಕೆ ತರಲಾಗಿದ್ದು, ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಹತ್ಯೆಯಾಗಿರುವ ಸುಹಾಸ್ ಶೆಟ್ಟಿ ಅವಿವಾಹಿತ. ಅವರ ತಂದೆ ವಸಂತ್, ತಾಯಿ ಸುಲೋಚನಾ, ತಮ್ಮ ಸುಹಾನ್ ಕಾರಿಂಜದ ಮನೆಯಲ್ಲಿದ್ದು, ತೋಟ ನೋಡಿಕೊಂಡಿದ್ದಾರೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಾರಿಂಜದಲ್ಲಿರುವ ಸುಹಾಸ್ ಶೆಟ್ಟಿ ಮನೆಗೆ ಭೇಟಿ ನೀಡಿ ಮೃತದೇಹದ ಅಂತಿಮ ದರ್ಶನ ಪಡೆದರು.
ಸುಹಾಸ್ ಮನೆಗೆ ಭೇಟಿ, ತಾಯಿಗೆ ಸಾಂತ್ವನ:
ಹತ್ಯೆಯಾಗಿರುವ ಹಿಂದುತ್ವಪರ ಕಾರ್ಯಕರ್ತ, ರೌಡಿ ಶೀಟರ್ ಸುಹಾಸ್ ಶೆಟ್ಟಿ ಮನೆಗೆ ಶಾಸಕರಾದ ರಾಜೇಶ್ ನಾಯ್ಕ್, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಆರ್ಎಸ್ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್, ಹಿಂದುತ್ವವಾದಿ ಮುಖಂಡ ಅರುಣ್ ಪುತ್ತಿಲ ಭೇಟಿ ನೀಡಿ ಅವರ ತಾಯಿಗೆ ಸಾಂತ್ವನ ಹೇಳಿದರು.
ವಿಶ್ವಹಿಂದೂ ಪರಿಷತ್ ಮುಖಂಡ ಮಿಲಿಂದ್ ಪರಾಂಡೆ, ದಕ್ಷಿಣ ಪ್ರಾಂತ ಕಾರ್ಯವಾಹ ಶರಣ್ ಪಂಪ್ವೆಲ್, ಮಾಜಿ ಶಾಸಕ ಸಂಜೀವ ಮಠಂದೂರು ಮತ್ತಿತರರು ಇದ್ದರು. ಸುಹಾಸ್ ಶೆಟ್ಟಿ ಮನೆಯ ಬಳಿ ಸಾಕಷ್ಟು ಜನರು ಸೇರಿದ್ದಾರೆ.




