ಆಟೋಗಳ ನಡುವೆ ಮುಖಾಮುಖಿ ಢಿಕ್ಕಿ: ದಂಪತಿ ಸಾವು, ಹಲವು ಪ್ರಯಾಣಿಕರಿಗೆ ಗಾಯ
ಕುದೂರು: ಆಟೋಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ದಂಪತಿ ಸಾವನ್ನಪ್ಪಿ ಹಲವು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಕುದೂರು ಗ್ರಾಮದ ಜೈಪ್ರಕಾಶ್ (67) ಪತ್ನಿ ಉಷಾ (52) ಮೃತ ದಂಪತಿಗಳು. ಕುದೂರಿನಲ್ಲಿ ಔಷಧಿ ಮಳಿಗೆ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಜೈಪ್ರಕಾಶ್ ಭಾನುವಾರ ಮಗಳ ಮನೆಗೆ ಮೊಮ್ಮಗಳನ್ನು ಬಿಟ್ಟು ಬರಲು ಹೋಗಿದ್ದು ಬೆಂಗಳೂರಿನಿಂದ ಸೋಲೂರಿಗೆ ಬಂದಿದ್ದು, ಸೋಲೂರಿನಿಂದ ಕುದೂರಿಗೆ ಆಟೋದಲ್ಲಿ ಬರುವಾಗ ಅರಿಶಿನ ಕುಂಟೆ ಗ್ರಾಮದ ಮಧ್ಯೆ ಅಪಘಾತ ನಡೆದಿದೆ. ಸ್ಥಳದಲ್ಲೇ ಉಷಾ ಮೃತಪಟ್ಟಿದ್ದು ಜೈಪ್ರಕಾಶ್ ಕಾಲಿಗೆ ತೀವ್ರ ಪೆಟ್ಟಾಗಿ ಹೆಚ್ಚಿನ ಚಿಕಿತ್ಸೆಗಾಗಿ ನೆಲಮಂಗಲ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಆಟೋದಲ್ಲಿ ಅತಿ ಹೆಚ್ಚು ಪ್ರಯಾಣಿಕರು ಪ್ರಯಾಣ ಬೆಳೆಸುತ್ತಿದ್ದು, ಜತೆಗೆ ಆಟೋ ಅತಿ ವೇಗವಾಗಿ ಹೋಗುತ್ತಿತ್ತು ಎಂಬ ಆರೋಪ ಕೇಳಿ ಬಂದಿದ್ದು ಗ್ರಾಮದಲ್ಲಿ ಬೀದಿ ದೀಪಗಳ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದು ಮತ್ತು ಎದುರುಗಡೆ ಬಂದ ಆಟೋ ನಿಯಂತ್ರಣಕ್ಕೆ ಬಾರದೆ ಮುಖಾಮುಖಿ ಡಿಕ್ಕಿಯಾಗಿದೆ ಎನ್ನಲಾಗಿದೆ.
ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿ ಸೋಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗುತ್ತಿದ್ದು ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.




