ನಾವ್ಯಾರು ಡಿಕೆಶಿಯನ್ನು BJP ಪಕ್ಷಕ್ಕೆ ಕರೆದಿಲ್ಲ, ಕೇಂದ್ರದ ನಾಯಕರೇ ಎಲ್ಲ ತೀರ್ಮಾನ ಮಾಡುತ್ತಾರೆ: ಆರ್.ಅಶೋಕ್
ಮಂಡ್ಯ: ‘ಡಿ.ಕೆ. ಶಿವಕುಮಾರ್ ಬೇರೆ ಕಾಂಗ್ರೆಸ್ ನಾಯಕರಂತಲ್ಲ. ಬೇಕಾಗಿರುವುದನ್ನು ಒದ್ದು ಕಿತ್ತುಕೊಳ್ಳುವ ಜಾಯಮಾನ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಂಭಮೇಳಕ್ಕೆ ಹೋಗಬೇಡಿ ಎಂದಿದ್ದರು. ಆದರೂ ಡಿಕೆಶಿ ಕುಂಭಮೇಳಕ್ಕೆ ಹೋದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹಾಡಿ ಹೊಗಳಿದರು. ನಿಮಗೆ ಧಮ್ಮು, ತಾಕತ್ತಿದ್ದರೆ ಡಿಕೆಶಿಯನ್ನು ಪಕ್ಷದಿಂದ ಸಸ್ಪೆಂಡ್ ಮಾಡಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಸವಾಲು ಹಾಕಿದರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ‘ಕೇಂದ್ರ ಗೃಹಸಚಿವ ಅಮಿತ್ ಶಾ ಅವರೊಂದಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ವೇದಿಕೆ ಹಂಚಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ನಲ್ಲಿ ಅಸಮಾಧಾನದ ಮಾತು ಕೇಳಿಬರುತ್ತಿದೆ. ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನು ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ್ದರು. ಒಬ್ಬ ಮುಖ್ಯಮಂತ್ರಿಯೇ ಪ್ರಧಾನಿ ಭೇಟಿ ಮಾಡುವುದು ಕಷ್ಟ. ಅಂದರೆ ಈ ಭೇಟಿಗೆ ಏನರ್ಥ’ ಎಂದು ಪ್ರಶ್ನಾರ್ಥಕವಾಗಿ ನುಡಿದರು.
‘ಡಿಕೆಶಿ ಬಿಜೆಪಿ ಪಕ್ಷಕ್ಕೆ ಬರುವ ವಿಚಾರವಾಗಿ ನಮ್ಮಲ್ಲಿ ಚರ್ಚೆಯಾಗಿಲ್ಲ. ಮೊದಲು ಅವರನ್ನು ಸಸ್ಪೆಂಡ್ ಮಾಡಲಿ, ಮುಂದೆ ನೋಡೋಣಾ. ನಾವ್ಯಾರು ಡಿಕೆಶಿಯನ್ನು ಪಕ್ಷಕ್ಕೆ ಕರೆದಿಲ್ಲ. ಕೇಂದ್ರದ ನಾಯಕರೇ ಎಲ್ಲ ತೀರ್ಮಾನ ತೆಗೆದುಕೊಳ್ಳುತ್ತಾರೆ’ ಎಂದರು.




