ವಿಟ್ಲ: ಸಿಂಗಾರಿ ಬೀಡಿ ಮಾಲಕನ ಮನೆ ನಕಲಿ ಇ.ಡಿ ಅಧಿಕಾರಿಗಳ ಸೋಗಿನಲ್ಲಿ ದಾಳಿ ಪ್ರಕರಣ: ಕೇರಳದ ಪೊಲೀಸ್ ಅಧಿಕಾರಿಯ ಬಂಧನ
ವಿಟ್ಲ: ವಿಟ್ಲ ಠಾಣಾ ವ್ಯಾಪ್ತಿಯ ನಾರ್ಶ ಸಿಂಗಾರಿ ಬೀಡಿ ಮಾಲಕ ಮನೆಗೆ ನಕಲಿ ಇ.ಡಿ. ಅಧಿಕಾರಿಗಳ ಸೋಗಿ ಬಂದು ದಾಳಿ ನಡೆಸಿ 45 ಲಕ್ಷ ರೂ ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿ ಕೇರಳ ರಾಜ್ಯದ ಪೊಲೀಸ್ ಅಧಿಕಾರಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಕೊಡುಂಗಲ್ಲೂರು ಎ.ಎಸ್.ಐ. ಇರಿಂಗಾಲಕುಡ ನಿವಾಸಿ ಶಹೀರ್ ಬಾಬು(50) ಬಂಧನಕ್ಕೊಳಗಾದ ಪೊಲೀಸ್ ಅಧಿಕಾರಿ. ವಿಟ್ಲ ಪೊಲೀಸರ ಪ್ರತ್ಯೇಕ ತಂಡ ಆರೋಪಿಯನ್ನು ಬಂಧಿಸಿದೆ. ಈ ಪ್ರಕರಣದಲ್ಲಿ ಮೂರು ಮಂದಿಯನ್ನು ಈ ಹಿಂದೆಯೇ ಬಂಧಿಸಲಾಗಿತ್ತು.
ಜನವರಿ 3 ರಂದು ರಾತ್ರಿ ಈ ಘಟನೆ ನಡೆದಿತ್ತು. ಬಂಟ್ವಾಳ, ಬೊಳ್ನಾಡು ನಾರ್ಶ ನಿವಾಸಿಯಾದ ಉದ್ಯಮಿ ಎಂ.ಸುಲೈಮಾನರ ಮನೆಯಲ್ಲಿ ಇ.ಡಿ.ಹೆಸರಿನಲ್ಲಿ ದಾಳಿ ನಡೆದಿತ್ತು. ರಾತ್ರಿ 8 ಗಂಟೆಯ ವೇಳೆ ತಮಿಳುನಾಡು ನೋಂದಾಯಿತ ಕಾರಿನಲ್ಲಿ ಆಗಮಿಸಿದ ಆರು ಮಂದಿಯ ತಂಡ ಮನೆಯೆಲ್ಲ ಜಾಲಾಡಿದೆ. ಅನಂತರ ಮನೆಯಲ್ಲಿದ್ದ 45 ಲಕ್ಷ ರೂ, 3 ಮೊಬೈಲು ಪೋನುಗಳೊಂದಿಗೆ ತಂಡ ಮರಳಿದೆ. ಬೆಂಗಳೂರು ಇ.ಡಿ ಕಚೇರಿಗೆ ಬಂದು ದಾಖಲೆಗಳನ್ನು ತೋರಿಸಿ ಈ ಹಣ ವಾಪಾಸು ಪಡೆಯಿರಿ ಎಂದು ತಂಡ ಹೇಳಿದೆ. ಇದು ದರೋಡೆಯೆಂದು ಅನಂತರ ತಿಳಿದ ಮನೆಯವರು ಕೂಡಲೇ ಪೊಲೀಸರಿಗೆ ದೂರು ನೀಡಿದರು. ವಿಟ್ಲ ಪೊಲೀಸರು ಈ ಪ್ರಕರಣದ ತನಿಖೆ ತೀವ್ರಗೊಳಿಸಿ ಕೊಲ್ಲಂ ನಿವಾಸಿಗಳಾದ ಮೂರು ಮಂದಿಯನ್ನು ಬಂಧಿಸಿದ್ದರು.
ಘಟನೆಯ ನಂತರ ಕರ್ತವ್ಯಕ್ಕೆ ಮರಳಿದ ಎ.ಎಸ್.ಐ. ಎಂದಿನಂತೆ ಇದ್ದರೆನ್ನಲಾಗಿದೆ. ಕೆಲವೊಮ್ಮೆ ರಜೆ ತೆಗೆಯುತ್ತಿದ್ದರೆನ್ನಲಾಗಿದೆ. ವಿಟ್ಲ ಪೊಲೀಸರು ರೂರಲ್ ಎಸ್.ಪಿ.ಬಿ.ಕೃಷ್ಣ ಕುಮಾರರನ್ನು ಭೇಟಿಯಾಗಿ ಮಾಹಿತಿ ನೀಡಿದರು. ಈ ವೇಳೆ ಶಹೀರ್ ಬಾಬು ರಜೆಯಲ್ಲಿ ತೆರಳಿದ್ದರು. ಕೇರಳ ಪೊಲೀಸರು ಆತನ ಇರುವಿಕೆಯನ್ನು ಪತ್ತೆಹಚ್ಚಿದ್ದು, ವಿಟ್ಲ ಪೊಲೀಸರು ಬಂಧಿಸಿ ಕರ್ಣಾಟಕಕ್ಕೆ ಕರೆತಂದಿದ್ದಾರೆ.




