ಉಳ್ಳಾಲ: ನರಿಂಗಾನ ಲವ-ಕುಶ ಜೋಡುಕರೆ ಕಂಬಳ: ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಚಾಲನೆ
ಉಳ್ಳಾಲ: ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಮೋರ್ಲ-ಬೋಳದಲ್ಲಿ ಸ್ಪೀಕರ್ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ತೃತೀಯ ವರ್ಷದ ನರಿಂಗಾನ ಲವ-ಕುಶ ಜೋಡುಕರೆ ಕಂಬಳಕ್ಕೆ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶನಿವಾರ ಬೆಳಗ್ಗೆ ಕಂಬಳದ ಕರೆಯನ್ನು ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಆಶೀರ್ವಚನ ನೀಡಿದ ಸ್ವಾಮೀಜಿಗಳು ನಮ್ಮ ಬದುಕಿನ ಏಳು-ಬೀಳುಗಳು, ಕಂಬಳದ ಕರೆಯಲ್ಲಿ ಓಡುವ ಕೋಣಗಳ ಓಟಕ್ಕೆ ಸಾಮ್ಯತೆ ಹೊಂದಿದೆ. ಇಡೀ ಜಗತ್ತಲ್ಲಿ ಯದ್ಧದ ಕಾರ್ಮೋಡ ಕವಿದಿದ್ದು, ಶಾಂತಿ, ಸಾಮರಸ್ಯದ ಅಗತ್ಯತೆ ಇದೆ. ಸಮಾಜದಲ್ಲಿ ಎಲ್ಲರೂ ಒಟ್ಟಾಗಿ ಸಹಬಾಳ್ವೆ ನಡೆಸುವುದೆ ನಮ್ಮ ಉದ್ದೇಶವಾಗಬೇಕು. ಆ ನಿಟ್ಟಿನಲ್ಲಿ ಕಂಬಳವು ಜಾತಿ, ಧರ್ಮಗಳ ನಡುವೆ ಪರಸ್ಪರ ಸಾಮರಸ್ಯ ಐಕ್ಯ ಬೆಸೆಯುವ ಕ್ರೀಡೆಯಾಗಿ ಬೆಳೆಯಲಿ ಎಂದು ಹಾರೈಸಿದರು.
ನರಿಂಗಾನ ಕಂಬಳ ಸಮಿತಿ ಅಧ್ಯಕ್ಷರಾದ ಯು.ಟಿ.ಖಾದರ್ ಮಾತನಾಡಿ ಕಂಬಳಕ್ಕೆ ನಮ್ಮ ನಾಡಿನಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಅಭಿಮಾನಿಗಳಿದ್ದಾರೆ. ಕಳೆದ ಮೂರು ವರ್ಷದಿಂದ ವೆಂಕಪ್ಪ ಕಾಜವರ ನೇತೃತ್ವದಲ್ಲಿ ಸರ್ವರೂ ಒಗ್ಗೂಡಿ ಮಾಡುವ ಕಂಬಳವು ಉತ್ಸವದಂತಾಗಿದೆ ಎಂದರು.




