ವಿಸ್ಡಮ್ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಾರ್ಷಿಕೋತ್ಸವದ ಸಂಭ್ರಮ
ಮಂಗಳೂರು: ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಬುಡೋಳಿ- ಗಡಿಯಾರ ಎಂಬ ಪರಿಸರದಲ್ಲಿ, ಕಳೆದ ಇಪ್ಪತ್ತು ವರ್ಷಗಳಿಂದ ನೆಲೆಗೊಂಡಿರುವ ಪ್ರತಿಷ್ಟಿತ ಆಂಗ್ಲ ಮಾಧ್ಯಮ ಶಾಲೆಯಾಗಿರುವ, ವಿಸ್ಡಮ್ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಇತ್ತೀಚೆಗೆ (04.01.2025 ರಂದು) ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಯಿತು.







ವಿಸ್ಡಮ್ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಡಾ. ಜುನೈದ್ ರವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮವನ್ನು, ಶ್ರೀರಾಮ ಪದವಿ ಪೂರ್ವ ಕಾಲೇಜು ಪೆರ್ನೆ ಇದರ ಪ್ರಾಚಾರ್ಯರಾದ ಶ್ರೀಯುತ ಶೇಖರ್ ರೈ ಕೆ. ಯವರು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಸುದೀರ್ಘವಾದ ಉತ್ತಮ ಪ್ರೇರಣಾ ಮಾರ್ಗದರ್ಶನವನ್ನು ನೀಡಿದರು.
ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಕೇಂದ್ರ ಗೃಹ ವ್ಯವಹಾರ ಸಚಿವಾಲಯದ ಅಧೀನದ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ನ ಉನ್ನತ ಹುದ್ದೆಯಲ್ಲಿರುವ (ಸಿ. ಬಿ.ಐ.) ಅಧಿಕಾರಿಯಾಗಿರುವ ಸನ್ಮಾನ್ಯ ಮುಷ್ತಾಕ್ ಅಹಮದ್ ರವರು ವಿದ್ಯಾರ್ಥಿಗಳು ತಮ್ಮ ಕಲಿಕೆಯ ಆಸಕ್ತಿಯನ್ನು ಕೇವಲ ಪಠ್ಯ ಪುಸ್ತಕ ವಿಷಯಗಳಿಗೆ ಸೀಮಿತಗೊಳಿಸದೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಮುಂದಕ್ಕೆ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿಯೇ ಮುಂದುವರಿಯಬೇಕು ಎಂಬ ಸಲಹೆಯನ್ನು ನೀಡಿದರು.
ಶಾಲಾ ಸಂಚಾಲಕರಾದ, ಶ್ರೀ ಅಬ್ದುಲ್ ಖಾದರ್ ಕುಕ್ಕಾಜೆಯವರು, ಇಂದು ವಿದ್ಯಾರ್ಥಿಗಳು ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದಂತೆ ಮುಂದಿನ ದಿನಗಳಲ್ಲಿನ ವಾರ್ಷಿಕ ಪರೀಕ್ಷೆಯಲ್ಲಿಯೂ ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆಯ ಮೂಲಕ ತಮ್ಮ ಕಲಿಕಾ ಸಾಮರ್ಥ್ಯವನ್ನು ಸಾಬೀತುಪಡಿಸಲು ಸಾಧ್ಯವಾಗಬೇಕಿದೆಯಲ್ಲದೆ ತನ್ಮೂಲಕ ಬದುಕಿನ ಯಶಸ್ವಿಯನ್ನು ತಮ್ಮದಾಗಿಸಿಕೊಳ್ಳುವಂತೆ ಕಿವಿ ಮಾತು ಹೇಳಿದರು.
ಶಾಲಾ ಮುಖ್ಯ ಶಿಕ್ಷಕರಾದ ಇಬ್ರಾಹಿಂ ಒ. ರವರು, ಸಂಸ್ಥೆಯ 2024-25 ಶೈಕ್ಷಣಿಕ ವರ್ಷದ, ವಾರ್ಷಿಕ ವರದಿಯನ್ನು ವಾಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಡಾ. ಜುನೈದ್ ರವರು ಮುಂದಿನ ದಿನಗಳಲ್ಲಿ ವಿದ್ಯಾ ಸಂಸ್ಥೆಯ ಸಮಗ್ರ ಅಭಿವೃದ್ಧಿಯೊಂದಿಗೆ ಮುನ್ನಡೆಯುವಲ್ಲಿ ಆಡಳಿತ ಮಂಡಳಿ ಹಮ್ಮಿಕೊಂಡ ಆಮೂಲಾಗ್ರ ಯೋಜನೆಗಳ ಕುರಿತು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸ್ಥಳೀಯ ಬದ್ರಿಯಾ ಜುಮಾ ಮಸೀದಿ ಗಡಿಯಾರ ಇದರ ಅಡಳಿತ ಮಂಡಳಿಯ ಅಧ್ಯಕ್ಷರಾಗಿರುವ, ಜನಾಬ್ ರಿಯಾಝ್ ಕಲ್ಲಾಜೆಯವರು ವಿದ್ಯಾರ್ಥಿಗಳು ಉತ್ತಮ ಶಿಕ್ಷಣದ ಜತೆಗೆ ಉತ್ತಮ ಸಂಸ್ಕೃತಿಯನ್ನು ತಮ್ಮದಾಗಿಸಿಕೊಳ್ಳಬೇಕಾದ ಅಗತ್ಯತೆಯ ಬಗ್ಗೆ ಒತ್ತಿ ಹೇಳಿದರು. ಹಾಗೂ ವಿಸ್ಡಮ್ ವಿದ್ಯಾ ಸಂಸ್ಥೆಯ ವ್ಯಾಪ್ತಿಯ ಪ್ರದೇಶದಲ್ಲಿನ (ಪಂಚಾಯತ್ ವಾರ್ಡ್) ಜನ ಪ್ರತಿನಿಧಿಯವರಾದ ಶ್ರೀ ಶೀನ ನಾಯ್ಕ ನೆಕ್ಕಿಲಾಡಿ ಸದಸ್ಯರು ಕಡೇಶಿವಾಲಯ ಗ್ರಾಮ ಪಂಚಾಯತ್ ಸಂದರ್ಭೋಚಿತವಾಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಅಲ್ಲದೆ ಸಂಸ್ಥೆಯ ಕಾರ್ಯ ನಿರ್ವಾಹಕರಾದ, ಶ್ರೀ ಅಸ್ಗರ್ ಹುಸೈನ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಜನಾಬ್ ಅಬ್ದುಲ್ ರಹಿಮಾನ್, ವಿದ್ಯಾರ್ಥಿ ನಾಯಕಿ ಕುಮಾರಿ ಝಯಿನಬ್ ನಸ್ರೀನ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸುಮಾರು ಇಪ್ಪತ್ತೊಂದು (ಇವೆಂಟ್ಸ್ ಗಳು) ವೈವಿಧ್ಯಮಯ ಕಲಾ ಪ್ರತಿಭೆಗಳಿಗೆ ಸಂಬಂಧಿಸಿದಂತೆ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳ ಮೂಲಕ ಬಹುಮಾನವನ್ನು ವಿತರಿಸಲಾಯಿತು ಇದನ್ನು ಶಿಕ್ಷಕಿಯರಾದ ಶ್ರೀಮತಿ ಅಲಿಮತ್ ಸಅದಿಯಾ ಮತ್ತು ಶ್ರೀಮತಿ ಆಬಿದಾರವರು ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು.
ಶಿಕ್ಷಕಿ ಶ್ರೀಮತಿ ಸಿನಾನ ಕಾರ್ಯಕ್ರಮವನ್ನು ನಿರೂಪಿಸಿದರು, ಆರಂಭದಲ್ಲಿ, ಶಿಕ್ಷಕಿಯರಾದ ಶ್ರೀಮತಿ ಮುಬೀನಾರವರು, ಸ್ವಾಗತಿಸಿದರು ಮತ್ತು ಕೊನೆಯಲ್ಲಿ ಶಿಕ್ಷಕಿ, ಕುಮಾರಿ ಆಶಿಕಾರವರು ಧನ್ಯವಾದವಿತ್ತರು.




