ವಿಟ್ಲ: ಅಪ್ಪೇರಿಪಾದೆ ಮಲತ್ಯಾಜ್ಯ ಘಟಕ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಅಶೋಕ್ ರೈ: ಅಧಿಕಾರಿಗಳ ಜತೆ ಸಭೆ – ಕಾಮಗಾರಿ ಸ್ಥಗಿತಕ್ಕೆ ಶಾಸಕರ ಸೂಚನೆ
ವಿಟ್ಲ: ಪಟ್ಟಣ ಪಂಚಾಯತಿ ವ್ಯಾಪ್ತಿಯ ಅಪ್ಪೆರಿ ಪಾದೆಯಲ್ಲಿ ಮಲತ್ಯಾಜ್ಯ ಘಟಕ ನಿರ್ಮಾಣಕ್ಕೆ ಸ್ಥಳೀಯರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಅಶೋಕ್ ರೈ ಅವರು ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಹೆಸರಿನಲ್ಲಿ ಜನವಿರೋಧಿ ಕಾರ್ಯಗಳಿಗೆ ಬೆಂಬಲ ಇಲ್ಲ. ಪಕ್ಷಾತೀತವಾಗಿ ಜನರ ಭಾವನೆಗಳಿಗೆ ಸ್ಪಂದಿಸಿ ನಿರ್ಧಾರ ಕೈಗೊಳ್ಳುವುದು ಅನಿವಾರ್ಯ ಎಂದರು. ಮಲತ್ಯಾಜ್ಯ ಘಟಕ ನಿರ್ಮಾಣ ಬೇಡ ಎಂದು ಈಗಾಗಲೇ ಪಟ್ಟಣ ಪಂಚಾಯತಿಗೆ ಸೂಚಿಸಿದ್ದೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸ್ಥಳೀಯರು ಇಲ್ಲಿ 250 ರಷ್ಟು ಮನೆಗಳಿವೆ ಹಾಗೂ ಸೀಮೆಯ ದೇವರಾದ ಪಂಚಲಿಂಗೇಶ್ವರ ದೇವರ ಜಾತ್ರೆಯ ಜಳಕದ ಕಟ್ಟೆ ಇದೆ. ಹಾಗಾಗಿ ಇಲ್ಲಿ ಘಟಕ ಸ್ಥಾಪನೆಗೆ ಬಿಡಲಾರೆವು ಎಂದರು. ವಿಟ್ಲ ಪಟ್ಟಣ ಪಂಚಾಯತಿ ಸದಸ್ಯ ವಿ.ಕೆ.ಎಂ ಆಶ್ರಫ್, ಹಸೈನಾರ್ ನೆಲ್ಲಿಗುಡ್ಡೆ, ವಿಟ್ಲ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ, ಅಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷ ಪದ್ಮನಾಭ ಸಣ್ಣಗುತ್ತು, ಮುರಳೀಧರ ಮಠಂತಬೆಟ್ಟು, ಮುಖ್ಯಾಧಿಕಾರಿ ಕರುಣಾಕರ, ಸ್ಥಳೀಯರಾದ ಯೋಗೀಶ ಕಾಶಿಮಠ, ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು.




