ಸರಣಿ ಕಳವು ಪ್ರಕರಣ: ರೌಡಿಶೀಟರ್, ಆತನ ಪತ್ನಿ ಸೇರಿ ಐವರು ಆರೋಪಿಗಳ ಬಂಧನ
ಬೆಂಗಳೂರು: ಮನೆಗಳ ಬಾಗಿಲಿಗೆ ಹಾಕಲಾಗಿದ್ದ ಬೀಗ ಒಡೆದು ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡುತ್ತಿದ್ದ ರೌಡಿಶೀಟರ್, ಆತನ ಪತ್ನಿ ಸೇರಿದಂತೆ ಐವರನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.
ಬ್ಯಾಡರಹಳ್ಳಿಯ ಮಾಣಿಕ್ಯ(26), ರೌಡಿಶೀಟರ್ ಗೌತಮ್ ಶೆಟ್ಟಿ(30), ಆತನ ಪತ್ನಿ ಶಿಬಾ(28), ಸಹಚರರಾದ ದಯಾನಂದ್(27) ಮತ್ತು ನರಸಿಂಹ(28) ಬಂಧಿತರು.
ಆರೋಪಿಗಳಿಂದ ₹21 ಲಕ್ಷ ಮೌಲ್ಯದ 325 ಗ್ರಾಂ ಚಿನ್ನಾಭರಣ, ಒಂದು ಕೆ.ಜಿ 800 ಗ್ರಾಂ ಬೆಳ್ಳಿಯ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.
‘ಆರೋಪಿಗಳು ಎಚ್ಎಂಟಿ ಲೇಔಟ್ನ ಮನೆಯ ಬೀಗ ಒಡೆದು ಒಳ ನುಗ್ಗಿ ಚಿನ್ನಾಭರಣ ದೋಚಿ ಪರಾರಿ ಆಗಿದ್ದರು. ಮನೆ ಮಾಲೀಕರು ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.




