ಕಾಲೇಜಿನ ವಿದ್ಯಾರ್ಥಿನಿಯರಿಗೆ ಬಸ್ಕಿ ಹೊಡೆಯುವ ಶಿಕ್ಷೆ: 200 ಬಸ್ಕಿ ಹೊಡೆದು ಪ್ರಜ್ಞೆತಪ್ಪಿ ಬಿದ್ದ ವಿದ್ಯಾರ್ಥಿನಿಯರು
ಹೈದರಾಬಾದ್: ಕಾಲೇಜಿನ ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಪ್ರಾಂಶುಪಾಲರು ವಿಧಿಸಿದ ಬಸ್ಕಿ ಶಿಕ್ಷೆಯಿಂದಾಗಿ ಯುವತಿಯರು ಅಸ್ವಸ್ಥಗೊಂಡಿರುವ ಘಟನೆ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ರಂಪಚೋಡವರಂನಲ್ಲಿ ನಡೆದಿದೆ.
ರಂಪಚೋಡವರಂನ ಎಪಿಆರ್ ಯುವತಿಯರ ಜೂನಿಯರ್ ಕಾಲೇಜ್ನ ಪ್ರಾಂಶಪಾಲರಾದ ಪುಸುನಾ ಮತ್ತು ಪಿಡಿ ಕೃಷ್ಣಕುಮಾರಿ ಈ ರೀತಿಯ ಶಿಕ್ಷೆ ನೀಡಿದ್ದಾರೆ. ಕಾಲೇಜಿನ ಮೊದಲ ಮತ್ತು ಎರಡನೇ ವರ್ಷದ ಇಂಟರ್ ವಿದ್ಯಾರ್ಥಿನಿಯರಿಗೆ ಶಿಸ್ತು ಕಲಿಸುವ ಉದ್ದೇಶದಿಂದ ಈ ಶಿಕ್ಷೆ ನೀಡಲಾಗಿದೆ. ವಿದ್ಯಾರ್ಥಿನಿಯರು ಶಾಲೆಗಳ ನಿಯಮಗಳನ್ನು ಪಾಲನೆ ಮಾಡದ ಹಿನ್ನೆಲೆಯಲ್ಲಿ ಸತತ ನಾಲ್ಕು ದಿನ, ದಿನವೊಂದಕ್ಕೆ 100 ರಿಂದ 200 ಬಸ್ಕಿ ಹೊಡೆಯಬೇಕು ಎಂದು ಆದೇಶಿಸಿದ್ದಾರೆ.
ವಿದ್ಯಾರ್ಥಿನಿಯರು ಮೂರು ದಿನಗಳ ಕಾಲ 100 ರಿಂದ 200 ಬಸ್ಕಿ ಹೊಡೆದಿದ್ದಾರೆ. ಆದರೆ, ನಾಲ್ಕನೇ ದಿನದ ಬಸ್ಕಿ ವೇಳೆ 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದಾರೆ. ಕಾಲಿನ ತೀವು ನೋವಿನಿಂದಾಗಿ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಈ ಸಂಬಂಧ ಪೋಷಕರಿಗೆ ಮಾಹಿತಿ ನೀಡಲಾಗಿದೆ.
ಘಟನೆ ಸಂಬಂಧ ಮಾತನಾಡಿರುವ ರಂಪಚೋಡವರಂ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಮಿರಿಯಲ ಶಿರಿಶಾದೇವಿ ಈ ರೀತಿಯ ಶಿಕ್ಷೆ ನೀಡುವುದು ಖಂಡನಾರ್ಹವಾಗಿದ್ದು, ಇದು ಹೀನ ಕೃತ್ಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ನಿಗದಿತ ಕಾಲದೊಳಗೆ ತನಿಖೆಗೆ ನಡೆಸಿ ವರದಿ ನೀಡುವಂತೆ ಅವರು ಪೊಲೀಸರಿಗೆ ಸೂಚಿಸಿದ್ದಾರೆ ಪ್ರಿನ್ಸಿಪಾಲ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.