ಕಬಕ, ಕುಳ ಗ್ರಾಮದಲ್ಲಿ ಕಾಣಿಸಿಕೊಂಡ ಚಿರತೆ: ಬೆಚ್ಚಿ ಬಿದ್ದ ಜನತೆ
ಪುತ್ತೂರು ತಾಲೂಕಿನ ಕಬಕದ ಕುಳ ಎಂಬಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿ ಜನತೆ ಬೆಚ್ಚಿ ಬಿದ್ದಿದ್ದಾರೆ.
ಕಬಕ-ವಿಟ್ಲ ರಸ್ತೆಯ ಅಂಗನವಾಡಿ ಪಕ್ಕದಲ್ಲೇ ಸುಮಾರು 10 ನಾಯಿಗಳು ನೆನ್ನೆ ರಾತ್ರಿ ಬೊಗಳುವ ಸದ್ದಿಗೆ ಅಲ್ಲಿನ ಮನೆಯ ಮೂಸಾ ಎಂಬವರು ಎದ್ದು ನೋಡಿದಾಗ ಚಿರತೆ ಓಡಾಡುವುದನ್ನ ನೋಡಿದ್ದಾರೆ. ಭಯಭೀತಿಗೊಂಡ ಮೂಸಾ, ಬಳಿಕ ಅವರ ಪತ್ನಿಗೆ ವಿಚಾರ ತಿಳಿಸಿದ್ದಾರೆ.
ಈ ವೇಳೆ ಇಬ್ಬರೂ ಕಿಟಕಿಯಿಂದ ನೋಡುವಾಗ ಚಿರತೆ ಓಡುವುದನ್ನ ಕಣ್ಣಾರೆ ನೋಡಿದ್ದಾರೆ. ಇದೀಗ ಸ್ಥಳದಲ್ಲಿ ಚಿರತೆಯ ಹೆಜ್ಜೆಗುರುತು ಪತ್ತೆಯಾಗಿದೆ. ನಂತರ ಯಾರೂ ಮನೆಯಿಂದ ಹೊರಬರಬೇಡಿ ಎಂಬುವುದನ್ನ ಅಕ್ಕ ಪಕ್ಕದ ಮನೆಯವರಿಗೆ ಮಾಹಿತಿ ರವಾನಿಸಿದ್ದಾರೆ.
ಸುಮಾರು ದಿನಗಳಿಂದ ನಾಯಿಗಳು ಕಾಣೆಯಾಗುತ್ತಿದ್ದು ಇದೀಗ ಕಾಣೆಯಾಗುವುದಕ್ಕೆ ಕಾರಣ ಇದೇ ಚಿರತೆ ಎಂಬ ಅನುಮಾನ ಕೂಡ ವ್ಯಕ್ತವಾಗಿದೆ.
ಸದ್ಯ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಕುಳ ಪ್ರದೇಶಕ್ಕೆ ಆಗಮಿಸಲಿದ್ದಾರೆ ಎಂಬ ಮಾಹಿತಿ ದೊರಕಿದೆ. ಇನ್ನು ಅಲ್ಲಿನ ಕೆಲ ಮನೆಯವರ ಜಾಗದಲ್ಲಿ ಚಿರತೆಯ ಕಾಲಿನ ಹೆಜ್ಜೆ ಗುರುತು ಕಾಣಿಸಿಕೊಂಡಿದೆ. ಸದ್ಯ ಕುಳ ಸುತ್ತಮುತ್ತಲಿನ ಯಾರೂ ಕೂಡಾ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.
ಇನ್ನು ಕುಳ ಭಾಗದಲ್ಲಿ ಚಿರತೆ ಕಾಣಿಸಿಕೊಂಡ್ರೂ, ಅದರ ಮುಂದುವರಿದ ಭಾಗವಾಗಿ ಆ ಭಾಗದಲ್ಲೇ ಚಲಿಸಿದರೆ ಬಪ್ಪಳಿಗೆ ಸಮೀಪಕ್ಕೆ ಬರುವಂತ ಸಾಧ್ಯತೆಯೂ ಇದೆ. ಯಾಕಂದ್ರೆ ಕುಳ ಕಾಡು ಬಪ್ಪಳಿಗೆ ಪರಿಸರಕ್ಕೆ ಅಂಟಿಕೊಂಡಿದೆ. ಚಿರತೆ ಹಾದಿ ತಪ್ಪಿದ್ದಲ್ಲಿ ಬಪ್ಪಳಿಗೆ ಭಾಗಕ್ಕೆ ಎಂಟ್ರಿ ಕೊಟ್ರ್ರೆ ಪುತ್ತೂರು ನಗರಕ್ಕೆ ಆಗಮಿಸಿದ್ರೂ ಅಚ್ಚರಿಯಿಲ್ಲ ಎಂಬ ಮಾತು ವ್ಯಕ್ತವಾಗಿದೆ.




