ಕಾಸರಗೋಡು: ಕಾರುಗಳ ನಡುವೆ ಭೀಕರ ಅಪಘಾತ: ವೃದ್ಧ ಮೃತ್ಯು-ಮೂವರಿಗೆ ಗಾಯ
ಕಾಸರಗೋಡು: ಕಾರುಗಳ ನಡುವೆ ಉಂಟಾದ ಅಪಘಾತದಲ್ಲಿ ವೃದ್ಧರೋರ್ವರು ಮೃತಪಟ್ಟು ಮೂವರು ಗಾಯಗೊಂಡ ಘಟನೆ ಮಂಜೇಶ್ವರ ಸಮೀಪದ ವರ್ಕಾಡಿ ಮೊರತ್ತಣೆಯಲ್ಲಿ ನಡೆದಿದೆ.
ಮೀಂಜ ತಲೆಕ್ಕಳ ಡಾ. ಅಬೂಬಕ್ಕರ್ ಮುಸ್ಲಿಯಾರ್ (65) ಸಾವನ್ನಪ್ಪಿದವರು. ಪತ್ನಿ ಅಮೀನಾ, ಪುತ್ರಿ ಸಬೀರಾ ಮತ್ತು ಸುಮಯ್ಯ ಅಪಘಾತದಲ್ಲಿ ಗಾಯಗೊಂಡವರು.
ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಮೊರತ್ತಣೆ ಜಂಕ್ಷನ್ ನಲ್ಲಿ ಅಪಘಾತ ನಡೆದಿದೆ. ಅಬೂಬಕ್ಕರ್ ಮುಸ್ಲಿಯಾರ್ ಸಂಚರಿಸುತ್ತಿದ್ದ ಆಲ್ಟೋ ಕಾರು ಮತ್ತು ಹೊಸಂಗಡಿ ಕಡೆಗೆ ತೆರಳುತ್ತಿದ್ದ ಇನೋವಾ ಕಾರಿನ ನಡುವೆ ಅಪಘಾತ ನಡೆದಿದೆ. ಗಂಭೀರ ಗಾಯಗೊಂಡ ಅಬೂಬಕ್ಕರ್ ರವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದರೂ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಉಳಿದ ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಾವೂರಿನಲ್ಲಿ ಸಂಬಂಧಿಕರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಈ ಬಗ್ಗೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





