ಮಹಿಳೆಯ ಕಿಡ್ನಾಪ್ ಪ್ರಕರಣ: ಭವಾನಿ ರೇವಣ್ಣ ಕಾರು ಚಾಲಕ ಬಂಧನ
ಬೆಂಗಳೂರು: ಮೈಸೂರು ಜಿಲ್ಲೆ ಕೆಆರ್ ನಗರ ಮಹಿಳೆಯ ಅಪಹರಣ ಆರೋಪ ಪ್ರಕರಣದಲ್ಲಿ ಭವಾನಿ ರೇವಣ್ಣ ಕಾರು ಚಾಲಕ ಅಜಿತ್ ನನ್ನು ಎಸ್ಐಟಿ ಅಧಿಕಾರಗಳು ಬಂಧಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಅಜಿತ್ ನನ್ನು ಎಸ್ಐಟಿ ಬಂಧಿಸಿದ್ದು, ಚಾಲಕ ಅಜಿತ್ ಚಿಕ್ಕಮಗಳೂರಿನ ಸಂಬಂಧಿಕರ ಮನೆಯಲ್ಲಿ ಇದ್ದ ಮಾಹಿತಿ ಆಧರಿಸಿ ಚಿಕ್ಕಮಗಳೂರಿನಲ್ಲಿ ಎಸ್ಐಟಿ ಅಧಿಕಾರಿಗಳು ಹುಡುಕಾಟ ನಡೆಸಿದ್ದರು.
ಈ ಹಿಂದೆ ಅಜಿತ್ ಮಾವನ ಮನೆಯಲ್ಲಿ ಕೂಡ ಶೋಧ ನಡೆಸಿದ್ದರು. ಸಂತ್ರಸ್ತೆಯ ವಿಡಿಯೋ ರೆಕಾರ್ಡ್ ಮಾಡಿ ವೈರಲ್ ಮಾಡಿರುವ ಆರೋಪ ಅಜಿತ್ ಮೇಲಿದೆ. ಸಂತ್ರಸ್ತೆಯನ್ನು ಮನೆಯಿಂದ ಕಾರಿನಲ್ಲಿ ಕರೆದೊಯ್ದ ಆರೋಪ ಕೂಡ ಇದೆ. ಭವಾನಿ ಸೂಚನೆ ಮೇರೆಗೆ ಅಜಿತ್ ಸಂತ್ರಸ್ತೆಯನ್ನು ಮನೆಯಿಂದ ಕರೆದೊಯ್ದ ಎನ್ನಲಾಗಿತ್ತು.
ಕಿಡ್ನ್ಯಾಪ್ ಬಗ್ಗೆ ಕೆಆರ್ ನಗರ ಠಾಣೆಯಲ್ಲಿ ಸಂತ್ರಸ್ತೆಯ ಮಗ ದೂರು ನೀಡಿದ್ದ. ಇದರ ಅನ್ವಯ ಭವಾನಿ ಕಾರು ಚಾಲಕ ಅಜಿತ್ ವಿರುದ್ಧ ಎಸ್ಐಟಿ ಎಫ್ಐಆರ್ ದಾಖಲಿಸಿತ್ತು. ಮತ್ತೊಂದೆಡೆ, ಪ್ರಕರಣದಲ್ಲಿ 20ಕ್ಕೂ ಹೆಚ್ಚು ದಿನಗಳಿಂದ ತಲೆಮರೆಸಿಕೊಂಡಿದ್ದ ಭವಾನಿ ರೇವಣ್ಣ ಶುಕ್ರವಾರ ವಿಚಾರಣೆಗೆ ಹಾಜರಾದರು. ಮಧ್ಯಂತರ ನಿರೀಕ್ಷಣಾ ಜಾಮೀನು ಸಿಕ್ಕ ಬೆನ್ನಲ್ಲೇ ಅವರು ಎಸ್ಐಟಿ ವಿಚಾರಣೆಗೆ ಹಾಜರಾದರು.




