ಸಂಸದೆ ಕಂಗನಾ ರಣಾವತ್ ಕೆನ್ನೆಗೆ ಹೊಡೆದಿದ್ದ ಭದ್ರತಾ ಪಡೆಯ ಪೇದೆ ಸೇವೆಯಿಂದ ಅಮಾನತು

ಚಂಡೀಗಡ: ರೈತರಿಗೆ ಅಗೌರವ ತೋರಿದ್ದಾರೆಂದು ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಂಸದೆ ಕಂಗನಾ ರಣಾವತ್ ಅವರ ಕೆನ್ನೆಗೆ ಹೊಡೆದಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಪೇದೆಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದ್ದು, ಆಕೆಯ ವಿರುದ್ಧ ಪೊಲೀಸರು ಪ್ರಕರಣವನ್ನೂ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಕಂಗನಾ ರಣಾವತ್, ಚಂಡೀಗಢ ವಿಮಾನ ನಿಲ್ದಾಣದ ಮಾರ್ಗವಾಗಿ ದಿಲ್ಲಿಗೆ ತೆರಳುವ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ಸಂಸದೆ ಕಂಗನಾ ರಣಾವತ್ ಅವರ ಈ ಹಿಂದಿನ ಹೇಳಿಕೆಯ ಕಾರಣಕ್ಕಾಗಿ ನಾನು ಅಂತಹ ಕೃತ್ಯವೆಸಗಿದೆ ಎಂದು ಆರೋಪಿ ಸಿಬ್ಬಂದಿ ಕುಲ್ವಿಂದರ್ ಕೌರ್ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದರು.
ಕೃಷಿ ಕಾಯ್ದೆಗಳನ್ನು ವಿರೋಧಿಸಿ, ರೈತರು ಪ್ರತಿಭಟನೆಗಿಳಿದಿದ್ದಾಗ, “ಅವರೆಲ್ಲ ನೂರು ರೂಪಾಯಿಗಾಗಿ ಪ್ರತಿಭಟನೆಯಲ್ಲಿ ಕುಳಿತಿದ್ದಾರೆ” ಎಂದು ಕಂಗನಾ ರಣಾವತ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. “ಅವರು ನೂರು ರೂಪಾಯಿಗಾಗಿ ಅಲ್ಲಿ ಹೋಗಿ ಕೂರಬಲ್ಲರೆ? ನನ್ನ ತಾಯಿಯೂ ಆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾಗ ಆಕೆ ಅಂತಹ ಹೇಳಿಕೆ ನೀಡಿದ್ದರು” ಎಂದು ಅಮಾನತುಗೊಂಡಿರುವ ಸಿಐಎಸ್ಎಯಫ್ ಪೇದೆ ಕುಲ್ವಿಂದರ್ ಕೌರ್ ಹೇಳಿದ್ದರು.

ಕೆಲಸದ ಆಫರ್ ನೀಡಿದ ವಿಶಾಲ್ ದದ್ಲಾನಿ:
ಗಾಯಕ ವಿಶಾಲ್ ದದ್ಲಾನಿ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ಅನಿಸಿಕೆ ತಿಳಿಸಿದ್ದಾರೆ. ‘ನಾನು ಎಂದಿಗೂ ಹಿಂಸೆಯನ್ನು ಬೆಂಬಲಿಸುವುದಿಲ್ಲ. ಆದರೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಮಹಿಳಾ ಸಿಬ್ಬಂದಿಯ ಸಿಟ್ಟು ಏನು ಎಂಬುದು ನನಗೆ ಚೆನ್ನಾಗಿ ಅರ್ಥ ಆಗುತ್ತದೆ. ಕುಲ್ವಿಂದರ್ ಕೌರ್ ವಿರುದ್ಧ ಸಿಐಎಸ್ಎಫ್ನವರು ಏನಾದರೂ ಕ್ರಮ ಕೈಗೊಂಡರೆ, ಅವರಿಗಾಗಿ ನನ್ನಲ್ಲಿ ಉದ್ಯೋಗ ಕಾದಿರುತ್ತದೆ ಎಂಬುದನ್ನು ನಾನು ಖಚಿತಪಡಿಸುತ್ತೇನೆ. ಜೈ ಹಿಂದ್, ಜೈ ಜವಾನ್, ಕೈ ಕಿಸಾನ್’ ಎಂದು ವಿಶಾಲ್ ದದ್ಲಾನಿ ಬರೆದುಕೊಂಡಿದ್ದಾರೆ.