ಕಿಡ್ನಾಪ್ ಪ್ರಕರಣ: ಭವಾನಿ ರೇವಣ್ಣ ಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು
ಬೆಂಗಳೂರು: ಮೈಸೂರಿನ ಕೆ.ಆರ್.ನಗರದ ಸಂತ್ರಸ್ತ ಮಹಿಳೆಯ ಕಿಡ್ನಾಪ್ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಭವಾನಿ ರೇವಣ್ಣ ಅವರಿಗೆ ಇಂದು ಹೈಕೋರ್ಟ್ ಷರತ್ತು ಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ.
ಭವಾನಿ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಿಚಾರಣೆ ನಡೆಸಿತ್ತು. ಈ ವೇಳೆ ಭವಾನಿ ರೇವಣ್ಣ ಅವರಿಗೆ ಜಾಮೀನು ನೀಡುವಂತೆ ಹಲವಾರು ಕಾರಣಗಳಿವೆ ಎಂದು ಭವಾನಿ ರೇವಣ್ಣ ಪರ ವಕೀಲರು ವಾದ ಮಂಡಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಸ್ಐಟಿ ಪರ ವಕೀಲರು, ಭವಾನಿ ರೇವಣ್ಣ ವಿರುದ್ಧ ಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ ಎಂದು ಕೋರ್ಟ್ ಗಮನಕ್ಕೆ ತಂದರು.
ಆದರೆ ಕೋರ್ಟ್ ಇದನ್ನು ತಿರಸ್ಕರಿಸಿ ಇಂದು ಮಧ್ಯಾಹ್ನ 1 ಗಂಟೆಯೊಳಗೆ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗಲು ಭವಾನಿ ರೇವಣ್ಣಗೆ ಸೂಚಿಸಿದೆ. ಅಲ್ಲದೆ ಐದು ಗಂಟೆ ಬಳಿಕ ಎಸ್ಐಟಿ ವಿಚಾರಣೆ ನಡೆಸುವಂತಿಲ್ಲವೆಂದು ಕೋರ್ಟ್ ಎಸ್ಐಟಿಗೆ ಸಹ ಸೂಚಿಸಿದೆ. ಇದಲ್ಲದೆ ಕೆ.ಆರ್.ನಗರ, ಹೊಳೆನರಸೀಪುರಕ್ಕೆ ತೆರಳದಂತೆ ಭವಾನಿ ರೇವಣ್ಣಗೆ ಷರತ್ತು ವಿಧಿಸಿ ಮುಂದಿನ ಶುಕ್ರವಾರವರೆಗೆ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್ ಆದೇಶಿದೆ.




