ಕೃಷ್ಣಾ ನದಿಯಿಂದ ನೀರು ತರಲು ತೆರಳುತ್ತಿದ್ದಾಗ ಅಪಘಾತ: ಮೂವರು ಸಾವು
ರಾಯಚೂರು: ಹನುಮ ಜಯಂತಿ ಹಿನ್ನೆಲೆಯಲ್ಲಿ ಕೃಷ್ಣಾ ನದಿಯಿಂದ ನೀರು ತರಲು ತೆರಳುತ್ತಿದ್ದ ಭಕ್ತರ ಮೇಲೆ ಬೊಲೇರೊ ವಾಹನ ಹರಿದ ಪರಿಣಾಮ ಮೂವರು ಸಾವನ್ನಪ್ಪಿ, ಇಬ್ಬರು ಗಾಯಗೊಂಡಿರುವ ಘಟನೆ ಶಕ್ತಿನಗರದ ಮೈಸೂರು ಪೆಟ್ರೋ ಕೆಮಿಕಲ್ಸ್ ಫ್ಯಾಕ್ಟರಿ ಹತ್ತಿರ ಇಂದು ಬೆಳಗಿನ ಜಾವ ಸಂಭವಿಸಿದೆ.
ಹೆಗ್ಗಸನಹಳ್ಳಿ ಗ್ರಾಮದ ಅಯ್ಯನಗೌಡ (29), ಮಹೇಶ್ (24) ಮತ್ತು ಉದಯ್ಕುಮಾರ್ ಮೃತ ದುರ್ದೈವಿಗಳು. ಇಂದು ಹನುಮಜಯಂತಿ ಪ್ರಯುಕ್ತ ಗ್ರಾಮದಲ್ಲಿನ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಏರ್ಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮದ 10 ಜನ ಸೇರಿ ಶಕ್ತಿನಗರದ ಹತ್ತಿರದಲ್ಲಿರುವ ಕೃಷ್ಣಾ ನದಿಯಿಂದ ಪೂಜೆಗೆಂದು ನೀರು ತರಲು ಬೆಳಗಿನ ಜಾವ ಹೊರಟಿದ್ದರು.
ಈ ಸಮಯದಲ್ಲಿ ಬೊಲೇರೊ ವಾಹನ ಇವರ ಮೇಲೆ ಹರಿದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಇವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.




