ನನ್ನಿಂದಾದ ತಪ್ಪಿಗೆ ಕ್ಷಮೆ ಕೇಳುತ್ತಿದ್ದೇನೆ ಎಂದ ನೇಹಾ ತಂದೆ ನಿರಂಜನಯ್ಯ
ಹುಬ್ಬಳ್ಳಿ: ಮಗಳ ಕೊಲೆ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತಿದೆ ಎಂದು ಹೇಳಿಕೆ ನೀಡಿದ್ದ ನೇಹಾ ತಂದೆ ಕ್ಷಮೆ ಯಾಚಿಸಿದ್ದಾರೆ.
ರಾಜ್ಯ ಸರ್ಕಾರದ ಹಾಗೂ ಪೊಲೀಸ್ ಕಮಿಷನರ್ ವಿರುದ್ಧ ಮಾತನಾಡಿದ್ದೆ. ನನ್ನಿಂದಾದ ತಪ್ಪಿಗೆ ಕ್ಷಮೆ ಕೇಳುತ್ತಿದ್ದೇನೆ ಎಂದು ಕೊಲೆಯಾದ ನೇಹಾ ಅವರ ತಂದೆ ನಿರಂಜನಯ್ಯ ಹಿರೇಮಠ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಗಳು ಕೊಲೆಯಾದ ನಂತರ ನಾನು ದುಃಖದಲ್ಲಿ ಇದ್ದೆ. ಮಗಳ ಅಂತ್ಯಕ್ರಿಯೆವರೆಗೂ ನನ್ನ ಜೊತೆಯಲ್ಲಿದ್ದ ನನ್ನವರು, ನಂತರ ಕಂಡಿರಲಿಲ್ಲ. ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದು ಭಾವಿಸಿ, ಮಾಹಿತಿಯ ಕೊರತೆಯಿಂದ ಸರ್ಕಾರದ ವಿರುದ್ಧ ಮಾತನಾಡಿದ್ದೆ. ಪ್ರಕರಣ ಕುರಿತು ಎಲ್ಲ ಮಾಹಿತಿಯನ್ನು ನಮ್ಮ ಪಕ್ಷದವರೇ ಸರ್ಕಾರಕ್ಕೆ ಸಂಪೂರ್ಣ ಮಾಹಿತಿ ಒದಗಿಸಿದ್ದಾರೆ ಎಂದು ನಿನ್ನೆ(ಸೋಮವಾರ) ತಿಳಿಯಿತು. ನನ್ನಿಂದ ತಪ್ಪಾಗಿದೆ’ ಎಂದರು.




