ಚೂರಿಯಿಂದ ಇರಿದು ಯುವಕನ ಕೊಲೆ
ಕಲಬುರಗಿ: ಕಲಬುರಗಿ ನಗರದಲ್ಲಿ ಭಾನುವಾರ ರಾತ್ರಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ಮೆರವಣಿಗೆ ವೇಳೆ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನ್ಯೂ ಜೇವರ್ಗಿ ರಸ್ತೆಯ ರಾಷ್ಟ್ರಪತಿ ಚೌಕ್ನಲ್ಲಿ ನಡೆದಿದೆ.
ಅಶೋಕ ನಗರದ ನಿವಾಸಿ ಆಕಾಶ ಆಂಜನೇಯ (26) ಕೊಲೆಯಾದ ಯುವಕ. ಆತನ ಸ್ನೇಹಿತ ನವೀನ್ ಎಂಬಾತ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆಕಾಶ ಮತ್ತು ನವೀನ್ ಸ್ನೇಹಿತರಾಗಿದ್ದು, ಈ ಹಿಂದೆಯೂ ಗಲಾಟೆ ಮಾಡಿಕೊಂಡು ಮತ್ತೆ ಒಂದಾಗಿ ಒಟ್ಟಿಗೆ ಓಡಾಡುತ್ತಿದ್ದರು. ಭಾನುವಾರ ಬೆಳಿಗ್ಗೆಯೂ ಯಾವುದೋ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದರು. ಸ್ಥಳದಲ್ಲಿ ಇದ್ದವರು ಇಬ್ಬರನ್ನೂ ಬಿಡಿಸಿ ಕಳುಹಿಸಿದ್ದರು.
ರಾತ್ರಿ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆಯ ವೇಳೆ ರಾಷ್ಟ್ರಪತಿ ಚೌಕ್ನಲ್ಲಿ ಆಕಾಶ ಡ್ಯಾನ್ಸ್ ಮಾಡುತ್ತಿದ್ದ. ಹಿಂದುಗಡೆಯಿಂದ ಬಂದ ನವೀನ್, ಆತನ ಬೆನ್ನಿಗೆ ಚೂರಿ ಹಾಕಿ ಪರಾರಿಯಾದ ಎಂದು ಪೊಲೀಸರು ಮಾಹಿತಿ ನೀಡಿದರು.





