ತುಮಕೂರಿನಲ್ಲಿ ಬೆಳ್ತಂಗಡಿ ಮೂಲದ ಮೂವರ ಸುಟ್ಟು ಹತ್ಯೆಗೈದ ಘಟನೆ: ಪತ್ರಿಕಾಗೋಷ್ಠಿಯಲ್ಲಿ ಘಟನೆ ಕರಾಳ ದಂಧೆಯನ್ನು ಬಿಚ್ಚಿಟ್ಟ ತುಮಕೂರು ಎಸ್ಪಿ
ಬೆಳ್ತಂಗಡಿ: ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಮೂವರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಸಂಪೂರ್ಣ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರಾ ಪೊಲೀಸರು ಒಟ್ಟು ಎರಡು ಜನರನ್ನು ಬಂಧಿಸಿದ್ದು, ಉಳಿದ ಆರು ಜನರಿಗಾಗಿ ಬಲೆ ಬೀಸಿದ್ದಾರೆ. ಈ ಬಗ್ಗೆ ತುಮಕೂರು ಎಸ್ಪಿ ಅಶೋಕ್ ಕೆವಿ ಮಾ.25 ರಂದು ತುಮಕೂರು ಎಸ್ಪಿ ಕಚೇರಿಯಲ್ಲಿ ಕರೆದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಪ್ರಕರಣ ಬೆಳಕಿಗೆ ಬಂದದ್ದು ಹೇಗೆ?
22-03-2024 ರಂದು ಮಧ್ಯಾಹ್ನ ಸುಮಾರು 1.15 ಗಂಟೆಗೆ ಕೋರಾ ಪೊಲೀಸ್ ಠಾಣಾವ್ಯಾಪ್ತಿಯ ಕುಚ್ಚಂಗಿ ಕೆರೆಯಲ್ಲಿ ಒಂದು ಕಾರಿನಲ್ಲಿ 3 ಮನುಷ್ಯರ ದೇಹಗಳು ಸುಟ್ಟ ಸ್ಥಿತಿಯಲ್ಲಿರುವ ಬಗ್ಗೆ ಬಂದ ಮಾಹಿತಿಯ ಮೇರೆಗೆ ಕೋರಾ ಪೊಲೀಸ್ ಠಾಣೆಯ ಪಿಎಸ್ಐ ರವರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಒಂದು ಮಾರುತಿ ಸುಜುಕಿ S-PRESSO ಕಾರಿನ ಹಿಂಭಾಗದ ಸೀಟಿನಲ್ಲಿ ಒಂದು ಮತ್ತು ಡಿಕ್ಕಿಯಲ್ಲಿ ಎರಡು ದೇಹಗಳು ಸುಟ್ಟು ಕರಕಲಾಗಿದ್ದು, ಯಾರೋ ದುಷ್ಕರ್ಮಿಗಳು ಯಾರೋ 3 ಜನರನ್ನು ಯಾವುದೋ ಕಾರಣಕ್ಕೆ ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಕಾರಿನಲ್ಲಿ ಹಾಕಿ ಪೆಟ್ರೋಲ್ ಅಥವಾ ಬೇರಾವುದೋ ಇಂಧನ ಸುರಿದು ಬೆಂಕಿ ಹಚ್ಚಿ ಸುಟ್ಟಿರೋದು ಕಂಡು ಬಂದಿತ್ತು.
ಅದರಂತೆ ಕೋರಾ ಪೊಲೀಸ್ ಪ್ರಕರಣ ದಾಖಲಾಗಿತ್ತು.ನಂತರ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅಶೋಕ್ ಕೆ.ವಿ, ಐ.ಪಿ.ಎಸ್ ರವರ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ವಿ ಮರಿಯಪ್ಪ ಮತ್ತು ಬಿ.ಎಸ್ಅಬ್ದುಲ್ ಖಾದರ್ ಕೆ.ಎಸ್.ಪಿ.ಎಸ್ ರವರ ಸೂಚನೆ ಮತ್ತು ಮಾರ್ಗದರ್ಶನದಂತೆ ತುಮಕೂರಿನ ಪೊಲೀಸರ ತಂಡ ವಿಚಾರಣೆ ನಡೆಸಿದಾಗ ಕರಾಳ ದಂಧೆಯು ಬೆಳಕಿಗೆ ಬಂದಿದೆ.
ಇಬ್ಬರು ಆರೋಪಿಗಳ ಬಂಧನ, ಆರು ಜನರಿಗಾಗಿ ಶೋಧ:
ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ತುಮಕೂರಿನ ಶಿರಾ ಗೇಟ್ನಲ್ಲಿ ವಾಸವಿರುವ 1) ಪಾತರಾಜು @ ರಾಜು @ ರಾಜಗುರು @ಕುಮಾರ್, ಇನ್ನೊರ್ವ ಆರೋಪಿ ಸತ್ಯಮಂಗಲದ ವಾಸಿ ಗಂಗರಾಜು ಬಿನ್ ಹನುಮಂತರಾಯಪ್ಪ ಎಂಬಾತನನ್ನು ಬಂಧಿಸಿದ್ದಾರೆ. ಇನ್ನು ಆರು ಜನ ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಮೃತರಿಗೂ ಪ್ರಮುಖ ಆರೋಪಿಗೂ ಹೇಗೆ ಪರಿಚಯ?
ಮೃತರಾದ ಬೆಳ್ತಂಗಡಿಯ ಬೆಳ್ತಂಗಡಿಯ ಇಶಾಕ್ ಸೀಮಮ್, ಶಾಹುಲ್ ಹಮೀದ್, ಸಿದ್ದಿಕ್ ಇವರಿಗೆ ಪಾತರಾಜನ ಜೊತೆ ಸೇರಿ ಸುಮಾರು 6-7 ತಿಂಗಳಿನಿಂದ ಸಂಪರ್ಕವಿತ್ತು. ಇವರೆಲ್ಲಾ ನಿಧಿ ಹುಡುಕುವ ಕೆಲಸ ಮಾಡುತ್ತಿದ್ದು, ಪಾತರಾಜನಿಗೆ ಸುಮಾರು 6 ಲಕ್ಷ ರೂ ಹಣ ನೀಡಿದ್ದರು. ಹಣ ನೀಡಿ 6 ತಿಂಗಳು ಕಳೆದರೂ ನಿಧಿ ಹುಡುಕಿ ಕೊಟ್ಟಿಲ್ಲವಾದ್ದರಿಂದ ಹಣ ವಾಪಸ್ ಕೊಡುವಂತೆ ಇಲ್ಲವಾದರೆ ಪೊಲೀಸರಿಗೆ ದೂರು ನೀಡುವುದಾಗಿ ಮೃತರು ಪಾತರಾಜನ ಹಿಂದೆ ಬಿದ್ದಿದ್ದರಿಂದ ಅವರನ್ನು ಹೇಗಾದರೂ ಮಾಡಿ ಕೊಲೆ ಮಾಡಬೇಕೆಂದು ಪಾತರಾಜು ತನಗೆ ಪರಿಚಯದ ಸತ್ಯಮಂಗಲದ ವಾಸಿ ಗಂಗರಾಜು ಮತ್ತು ಅವನ 6 ಜನ ಸಹಚರರಾದ ಪುಟ್ಟಸ್ವಾಮಯ್ಯನ ಪಾಳ್ಯದ ಮಧುಸೂಧನ್, ನವೀನ್, ವೆಂಕಟೇಶಪುರದ ಕೃಷ್ಣ, ಹೊಂಬಯ್ಯನಪಾಳ್ಯದ ಗಣೇಶ, ನಾಗಣ್ಣನಪಾಳ್ಯದ ಕಿರಣ್, ಕಾಳಿದಾಸನಗರದ ಸೈಮನ್, ಸೇರಿಸಿಕೊಂಡು ಮೂರು ಜನರನ್ನು ಕೊಲೆ ಮಾಡು ಪ್ಲ್ಯಾನ್ ಮಾಡಿ ಕೊಲೈಗೈದಿದ್ದರು
ಕೊಲೆಗಾರರಿಗೂ 3 ಕೆ ಜಿ ಚಿನ್ನ ಕೊಡೋದಾಗಿ ಹೇಳಿದ್ದ ಪ್ರಕರಣದ ಮಾಸ್ಟರ್ ಮೈಂಡ್ ಪಾತರಾಜು:
ಇನ್ನು ಕೊಲೆ ಮಾಡುವ ಪ್ಲ್ಯಾನ್ ವೇಳೆ ಪ್ರಕರಣದ ಮಾಸ್ಟರ್ ಮೈಂಡ್ ಪಾತರಾಜು ಕೊಲೆಗಾರರಿಗೂ 3 ಕೆ.ಜಿ ಚಿನ್ನ ಕೊಡೋದಾಗಿ ಆಸೆ ತೋರಿಸಿದ್ದಾನೆ. ಇನ್ನು ಪ್ಲ್ಯಾನ್ ನಂತೆ ದಿನಾಂಕ: 22.03.2024 ರಂದು ಬೆಳಗಿನ ಜಾವ 12 ಗಂಟೆ ಸುಮಾರಿಗೆ ಮೃತರನ್ನು ಚಿನ್ನ ನೀಡುವುದಾಗಿ ಬೀರನಕಲ್ಲು ಬೆಟ್ಟದ ಸಮೀಪ ಕರೆಸಿಕೊಂಡುಅವರುಗಳನ್ನು ಮಚ್ಚು, ಲಾಂಗ್ ಮತ್ತು ಡ್ಯಾಗರ್ನಿಂದ ಹಲ್ಲೆ ಮಾಡಿ ಕೊಲೆ ಮಾಡಿ ಅವರದೇ ಕಾರಿನಲ್ಲಿ ಕುಚ್ಚಂಗಿ ಕೆರೆಗೆ ತೆಗೆದುಕೊಂಡು ಹೋಗಿ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ತನಿಖೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದು ಉಳಿದವರಿಗಾಗಿ ಶೋಧ ನಡೆಸುತ್ತಿದ್ದಾರೆ.
ಪರಾರಿಯಾದ ಆರು ಜನ ಆರೋಪಿಗಳು:
ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಅರೆಸ್ಟ್ ಮಾಡಲಾಗಿದ್ದು, ಇನ್ನುಳಿದಂತೆ ಪುಟ್ಟಸ್ವಾಮಯ್ಯನ ಪಾಳ್ಯದ ಮಧುಸೂದನ್(24), ಸಂತೇಪೇಟೆಯ ನವೀನ್(24), ವೆಂಕಟೇಶಪುರದ ಕೃಷ್ಣ(22), ಹೊಂಬಯ್ಯನಪಾಳ್ಯದ ಗಣೇಶ್(19), ನಾಗಣ್ಣನಪಾಳ್ಯದ ಕಿರಣ್(23), ಕಾಳಿದಾಸನಗರದ ಸೈಮನ್(18) ಪರಾರಿಯಾಗಿದ್ದು, ಇವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.




