ಬಂಟ್ವಾಳ: ಕೆದಿಲ ದೈವಸ್ಥಾನದ ವತಿಯಿಂದ ಪಾಟ್ರಕೋಡಿ ಮಸೀದಿಯಲ್ಲಿ “ಸೌಹಾರ್ದ ಇಫ್ತಾರ್ ಸಂಗಮ”
ಬಂಟ್ವಾಳ: ಪಾಟ್ರಕೋಡಿ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ರವಿವಾರ ಕೆದಿಲ ಶ್ರೀ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದ ಆಡಳಿತ ಸಮಿತಿ ವತಿಯಿಂದ ಸೌಹಾರ್ದ ಇಫ್ತಾರ್ ಸಂಗಮ ಕಾರ್ಯಕ್ರಮ ನಡೆಯಿತು.
ಇದೇ ವೇಳೆ ಮಸೀದಿ ವತಿಯಿಂದ ದೈವಸ್ಥಾನದ ಅಧ್ಯಕ್ಷ ಸಹಿತ ಪ್ರಮುಖರನ್ನು ಸನ್ಮಾನಿಸಲಾಯಿತು.
ಅದೇ ರೀತಿ ದೈವಸ್ಥಾನದ ವತಿಯಿಂದ ಮಸೀದಿಯ ಅಧ್ಯಕ್ಷ, ಕಾರ್ಯದರ್ಶಿ, ಖತೀಬರ ಸಹಿತ ದೈವಸ್ಥಾನಕ್ಕೆ ಸ್ಥಳದಾನ ಮಾಡಿದ ದಿ.ಫಕ್ರಬ್ಬ ಹಾಜಿಯವರ ಪುತ್ರ ಹಮೀದ್ ಹಾಜಿ, ಬ್ರಹ್ಮ ಕಲಶೋತ್ಸವ ಸಂದರ್ಭದಲ್ಲಿ ಉಚಿತವಾಗಿ ಆಟೋ ಸೇವೆ ನೀಡಿದ ರಿಕ್ಷಾ ಚಾಲಕ ಅಶ್ರಫ್ರನ್ನು ಸನ್ಮಾನಿಸಲಾಯಿತು.
ಹಿಂದೂ – ಮುಸ್ಲಿಮ್ – ಕ್ರೈಸ್ತ ಧರ್ಮದ ನೂರಾರು ಮಂದಿ ಭಾಗವಹಿಸುವಿಕೆಯ ಕಾರ್ಯಕ್ರಮ ಸೌಹಾರ್ದಕ್ಕೆ ಸಾಕ್ಷಿಯಾಯಿತು.
ಕೆದಿಲ ಶ್ರೀ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದಲ್ಲಿ ಇತ್ತೀಚೆಗೆ ಬ್ರಹ್ಮಕಲಶೋತ್ಸವ ನಡೆದಿತ್ತು. ಈ ವೇಳೆ ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಸಾಗುತ್ತಿದ್ದವರಿಗೆ ಪರಿಸರದ ಮಸೀದಿ ವ್ಯಾಪ್ತಿಯ ಮುಸ್ಲಿಮರು ಅಲ್ಲಲ್ಲಿ ರಸ್ತೆಯಂಚಿನಲ್ಲಿ ನಿಂತು ಶರಬತ್ತು ಹಂಚಿದ್ದರು.
ಮುಸ್ಲಿಮರು ಭಾಗಿಯಾಗಿ ಭಾವೈಕ್ಯ ಮೆರೆದಿದ್ದರು. ಇದೀಗ ದೈವಸ್ಥಾನದ ಆಡಳಿತ ಸಮಿತಿ ಮಸೀದಿಯಲ್ಲಿ ಇಫ್ತಾರ್ ಕೂಟ ಆಯೋಜಿಸುವ ಮೂಲಕ ಮತ್ತೊಮ್ಮೆ ಸೌಹಾರ್ದ ಸಂದೇಶ ಸಾರುವ ಮೂಲಕ ಮಾದರಿಯಾಗಿದೆ.