ರಸ್ತೆ ಅಪಘಾತದಲ್ಲಿ ಎಎಸ್ಐ ಸ್ಥಳದಲ್ಲೇ ಮೃತ್ಯು, ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ್ದೇ ಎಎಸ್ಐ ಸಾವಿಗೆ ಕಾರಣ
ಬೆಳಗಾವಿ: ಶನಿವಾರ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಎಎಸ್ಐ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಳಗಾವಿಯ ಯರಗಟ್ಟಿ ಪಟ್ಟಣದಲ್ಲಿ ನಡೆದಿದೆ.
ಯರಗಟ್ಟಿ ಪಟ್ಟಣದ ವಿಜಯಕಾಂತ ಮಿಕಲಿ (51) ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಎಎಸ್ಐ ಆಗಿದ್ದಾರೆ.
ಘಟನೆ ಬೆನ್ನಲ್ಲೇ ದೊಡವಾಡ ಠಾಣೆ ಪಿಎಸ್ಐ ನಂದೀಶರನ್ನು ಅಮಾನತು ಮಾಡಿ ಬೆಳಗಾವಿ ಎಸ್ಪಿ ಡಾ. ಭೀಮಾಶಂಕರ ಗುಳೇದ ಆದೇಶ ಹೊರಡಿಸಿದ್ದಾರೆ.
ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ್ದೇ ಎಎಸ್ಐ ಸಾವಿಗೆ ಕಾರಣ ಎಂಬುದು ಸಾಬೀತಾಗಿದೆ. ವಿಜಯಕಾಂತ ಮಿಕಲಿ ಬೈಲಹೊಂಗಲ ತಾಲೂಕಿನ ದೊಡವಾಡ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕರ್ತವ್ಯ ಮುಗಿಸಿ ಯರಗಟ್ಟಿಯಲ್ಲಿರುವ ಮನೆಗೆ ಬರುವಾಗ ರಸ್ತೆ ಅಪಘಾತ ಸಂಭವಿಸಿದೆ. ಅತಿವೇಗದಿಂದ ಬೈಕ್ ಚಲಾಯಿಸುವಾಗ ಹಂಪ್ ಜಿಗಿಸಿ ರಸ್ತೆ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಕೆಲ ತಿಂಗಳ ಹಿಂದೆಯೇ ಎಲ್ಲ ಪೊಲೀಸರು ಹೆಲ್ಮೆಟ್ ಧರಿಸುವುದನ್ನು ಬೆಳಗಾವಿ ಎಸ್ಪಿ ಕಡ್ಡಾಯಗೊಳಿಸಿದ್ದಾರೆ. ಮೇಲಾಧಿಕಾರಿಗಳ ನಿರ್ದೇಶನ ಸಮರ್ಪಕವಾಗಿ ಅನುಷ್ಠಾನಗೊಳಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ.





