ಮಂಗಳೂರು ಪ್ರೆಸ್ ಕ್ಲಬ್ ವರ್ಷದ ಪ್ರಶಸ್ತಿಗೆ ಮೈಮೂನ- ಮರ್ಝಿನಾ ಆಯ್ಕೆ
ಮಂಗಳೂರು: ಗ್ರಾಮೀಣ ಭಾಗದಲ್ಲಿ ಕ್ಷೀರಕ್ರಾಂತಿಯ ಅಪೂರ್ವ ಸಾಧಕಿಯರಾಗಿರುವ ಉಳ್ಳಾಲ ತಾಲೂಕಿನ ಹರೇಕಳ ಗ್ರಾಮದ ಬಾವಲಿಗುರಿಯ ‘ತಾಯಿ- ಮಗಳು ಮೈಮೂನ- ಮರ್ಝಿನಾ ಅವರು ಪ್ರತಿಷ್ಠಿತ ಮಂಗಳೂರು ಪ್ರೆಸ್ ಕ್ಲಬ್ ವರ್ಷದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹಿರಿಯ ಪತ್ರಕರ್ತ ಯು.ಕೆ.ಕುಮಾರನಾಥ್ ಮತ್ತು ಎಸ್ ಡಿಎಂ ಕಾನೂನು ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಪುಷ್ಪರಾಜ್ ನೇತೃತ್ವದ ಆಯ್ಕೆ ಸಮಿತಿ ಇವರನ್ನು ಆಯ್ಕೆ ಮಾಡಿದೆ.
ಬಾವಲಿಗುರಿಯ ದಿವಂಗತ ದಿ.ಅಬ್ದುಲ್ ಮಜೀದ್ ರಾಜ್ ಕಮಾಲ್ ಅವರ ಪತ್ನಿ ಮೈಮೂನಾ ಹಾಗೂ ಮಗಳು ಮರ್ಝಿನಾ ಕೃಷಿ, ಗೋಸಾಕಾಣಿಕೆ ಹೈನುಗಾರಿಕೆ ಲಾಭದಾಯಕವಲ್ಲ ಎಂದು ಎಲ್ಲರೂ ದೂರ ಸರಿಯುತ್ತಿರುವ ಈಗಿನ ಕಾಲಘಟ್ಟದಲ್ಲಿ ಸಾಂಪ್ರದಾಯಿಕ ಮತ್ತು ಅತ್ಯಾಧುನಿಕ ವಿಧಾನದ ಮೂಲಕ ಇವರು ಹೈನುಗಾರಿಕೆಯಲ್ಲಿ ಹೊಸ ಕ್ರಾಂತಿಯನ್ನುಂಟು ಮಾಡಿದ್ದಾರೆ.




