ವಿಟ್ಲ: ಕನ್ಯಾನದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ಪತ್ರಿಕಾಗೋಷ್ಠಿ ಕರೆದ ಕನ್ಯಾನ ಗ್ರಾ.ಪಂ ಉಪಾಧ್ಯಕ್ಷ: ಬಿ ಎಂ ಸೌಕತ್ ಎಂಬವರ ಜಮೀನಿನಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಗಣಿಗಾರಿಕೆ: ಗಣಿಗಾರಿಕೆಯಲ್ಲಿ ಅಧಿಕಾರಿಗಳು ಶಾಮೀಲು
ವಿಟ್ಲ: ಕನ್ಯಾನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮ ಮಣ್ಣಿನ ಗಣಿಗಾರಿಕೆ (ರೆಡ್ ಬಾಕ್ಸೈಟ್ ದಂಧೆ) ನಡೆಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ನಿರಂತರ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕನ್ಯಾನ ಗ್ರಾ.ಪಂ ಉಪಾಧ್ಯಕ್ಷ ಕೆ.ಪಿ ಅಬ್ದುಲ್ ರಹಿಮಾನ್ ಆರೋಪಿಸಿದ್ದಾರೆ.
ವಿಟ್ಲದಲ್ಲಿ ಗ್ರಾ.ಪಂ ಸದಸ್ಯರ ಜತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕನ್ಯಾನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎಂಎಲ್ಸಿ ಬಿ ಎಂ ಫಾರೂಕ್ ಮತ್ತು ಅವರ ಸಹೋದರ ಬಿ ಎಂ ಸೌಕತ್ ಎಂಬವರು ಸರ್ಕಾರದ ನಿವೇಶನಕ್ಕೆ ಕಾದಿರಿಸಿದ ೪ ಎಕ್ರೆ ಜಾಗದಲ್ಲಿ ಅಕ್ರಮ ಮಣ್ಣು ಸಾಗಾಣಿಕೆ ಮಾಡುತ್ತಿದ್ದು ಈ ಬಗ್ಗೆ ಹಲವಾರು ಬಾರಿ ದೂರು ನೀಡಿದರೂ ಈ ಬಗ್ಗೆ ತಹಶೀಲ್ದಾರರು ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರು ದ.ಕ ಜಿಲ್ಲೆ ಮತ್ತು ಕಂದಾಯ ಇತರ ಅಧಿಕಾರಿ ಇವರೆಲ್ಲರೂ ಪರಿಶೀಲನೆ ಮತ್ತು ಸರ್ವೆ ಮಾಡಿದ್ದರು. ಆದರೇ ಇದರ ಬಗ್ಗೆ ಯಾವುದೇ ಮಾಹಿತಿ ಮತ್ತು ಕ್ರಮಗಳನ್ನು ಇಲಾಖೆ ಕೈಗೊಂಡಿರುವುದಿಲ್ಲ. ಮತ್ತು ಇಲಾಖೆಯ ಜಿಲ್ಲಾಧಿಕಾರಿ, ಭೂ ಮತ್ತು ಗಣಿ ಇಲಾಖೆಯ ರಾಜ್ಯ ನಿರ್ದೇಶಕರು ಭೂ ಮತ್ತು ಗಣಿ ಇಲಾಖೆಯ ಮಂತ್ರಿಗಳು, ಕಂದಾಯ ಮಂತ್ರಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರು ಯಾವುದೇ ಮಾಹಿತಿ ನೀಡಿರುವುದಿಲ್ಲ. ದ.ಕ ಜಿಲ್ಲೆಯ ಕೊಳ್ನಾಡು ಪಜೀರು ಇನ್ನಿತರ ಪ್ರದೇಶಗಳ ಪರವಾನಿಗೆ ಇಟ್ಟುಕೊಂಡು ಕನ್ಯಾನ ಗ್ರಾಮದಿಂದ ದಿನಕ್ಕೆ ಸಾವಿರಾರು ಟನ್ ಕೆಂಪು ಮಣ್ಣು ಸಾಗಾಟ ಮಾಡಲಾಗುತ್ತಿದೆ. ನಕಲಿ ಪರವಾನಿಗೆಯಲ್ಲಿ ಕೂಡ ಅಕ್ರಮ ಮಣ್ಣು ಸಾಗಾಟ ಆಗುತ್ತಿರುವ ಬಗ್ಗೆ ಜನರು ಮಾತನಾಡುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಕೂಡ ಅಧಿಕಾರಿಗಳು ಇದನ್ನು ನಿಯಂತ್ರಿಸುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಪ್ರದೇಶದಿಂದ ಮಣ್ಣು ಹೇರಿಕೊಂಡು ಪ್ರತಿದಿನ ನೂರಾರು ಅಧಿಕ ಭಾರದ ಲಾರಿಗಳು ಸಂಚರಿಸುತ್ತಿರುವುದರಿಂದ ಇಲ್ಲಿಯ ರಸ್ತೆಗಳೆಲ್ಲವೂ ಹದಗೆಟ್ಟು ಹೋಗಿದೆ. ಇದರಿಂದ ರಸ್ತೆಯಲ್ಲಿ ಸಂಚರಿಸುವ ಇನ್ನೀತರ ವಾಹನಗಳಿಗೂ ಶಾಲಾ ವಿದ್ಯಾರ್ಥಿಗಳಿಗೆ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಓಡಾಡುವ ಸಾರ್ವಜನಿಕರಿಗೂ ಧಾರ್ಮಿಕ ಕೇಂದ್ರಗಳಿಗೆ ಹೋಗುವಂತಹ ಜನರಿಗೂ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಇದು ಪರಿಸರ ನಾಶಕ್ಕೆ ಕೂಡಾ ಕಾರಣವಾಗುತ್ತದೆ. ಅಕ್ರಮ ಗಣಿಗಾರಿಕೆ ನಿಯಂತ್ರಿಸಲು ರಾಜ್ಯ ಗಣಿ ಇಲಾಖೆಯಿಂದ ಜಿಪಿಎಸ್ ವ್ಯವಸ್ಥೆ ಜಾರಿಯಲ್ಲಿದ್ದರೂ ಕೂಡ ಅಧಿಕಾರಿಗಳು ಇದರ ಪರಿಶೀಲನೆ ನಡೆಸುವ ಗೋಜಿಗೆ ಹೋಗುತ್ತಿಲ್ಲ. ದ.ಕ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರಾದ ಕುಮಾರಿ ದ್ವಿತೀಯ ಅವರಿಗೆ ಅರ್ಜಿ ಮುಖಾಂತರ ದೂರು ನೀಡಿದರೂ ಹಾಗೂ ಅಕ್ರಮ ಮಣ್ಣು ಸಾಗಾಟದ ಬಗ್ಗೆ ದೂರು ನೀಡಲು ಫೋನ್ ಕರೆ ಮಾಡಿದರೂ ಯಾರ ಫೋನಿಗೂ ಸ್ಪಂದಿಸದೆ ಅಕ್ರಮ ಗಣಿಗಾರಿಕೆ ಮಾಡುವವರ ಪರವಾಗಿ ವರ್ತಿಸುತ್ತಿದ್ದಾರೆ. ಆದ್ದರಿಂದ ಗಣಿ ಮತ್ತು ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರಾದ ಕುಮಾರಿ ದ್ವಿತೀಯ ಇವರನ್ನು ಅಮಾನತುಗೊಳಿಸಬೇಕೆಂದು” ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕನ್ಯಾನ ಗ್ರಾಮ ಪಂಚಾಯತ್ ಸದಸ್ಯ ಮೊಯಿದೀನ್ ಕುಂಞ, ಅಬ್ದುಲ್ ಮಜೀದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.




