ಬೆಳ್ತಂಗಡಿ: ತಹಶೀಲ್ದಾರ್ ಮೇಲೆ ಹಲ್ಲೆಗೆ ಯತ್ನ: ಇಬ್ಬರು ಆರೋಪಿಗಳ ಬಂಧನ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಮದ್ದಡ್ಕ ಎಂಬಲ್ಲಿ ಇರುವ ಹಾಲಿನ ಡೈರಿಯ ಹಿಂಬಾಗದಲ್ಲಿ ಇದ್ದ ಖಾಲಿ ಜಾಗದಲ್ಲಿ ಅಬುಸಾಲಿ ಎಂಬವರ ಮಕ್ಕಳಾದ ರೌಫ್ ಹಾಗೂ ನಿಸಾರ್ ಎಂಬವರು ಶೆಡ್ ಒಂದನ್ನ ಪರವಾನಿಗೆ ಇಲ್ಲದೆ ಕಟ್ಟಿದ್ದರು.
ಈ ಬಗ್ಗೆ ಸ್ಥಳೀಯರು ಕಂದಾಯ ಇಲಾಖೆಗೆ ದೂರು ಬಂದಿದ್ದ ಹಿನ್ನಲೆಯಲ್ಲಿ ಜ.18 ರಂದು ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರು ಸಿಬ್ಬಂದಿ ಜೊತೆಯಲ್ಲಿ ಸ್ಥಳ ಪರಿಶೀಲನೆಗೆ ತೆರಳಿದ್ದರು.
ಈ ವೇಳೆ ಮಾಹಿತಿ ಪಡೆಯುವ ಸಂಧರ್ಭದಲ್ಲಿ ಆಕ್ರೋಶಗೊಂಡಿದ್ದ ಇಬ್ಬರು ಸಹೋದರರು ತಾಹಶೀಲ್ದಾರ್ ಅವರ ಮೇಲೆ ಹಲ್ಲೆಗ ಮುಂದಾಗಿದ್ದು, ತಕ್ಷಣ ಸ್ಥಳಿಯರು ಅವರ ರಕ್ಷಣೆ ಮಾಡಿದ್ದರು. ಈ ಬಗ್ಗೆ ತಾಹಶೀಲ್ದಾರ್ ಅವರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರು ದಾಖಲಾಗಿದ್ದ ಬಳಿಕ ತಲೆ ಮರೆಸಿಕೊಂಡಿದ್ದ ರೌಫ್ ಹಾಗೂ ನಿಸಾರ್ ಅವರನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಗುರುವಾರ ಮತ್ತೆ ಸ್ಥಳಕ್ಕೆ ಭೇಟಿ ನೀಡಿದ್ದ ತಾಹಶೀಲ್ದಾರ್ ಅವರು ಜೆಸಿಬಿ ಬಳಸಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್ ದ್ವಂಸಗೊಳಿಸಿದ್ದರು.




