ಸುಳ್ಯ: ಅಡಿಕೆಗೆ ಹಳದಿ ರೋಗ : ಮನನೊಂದು ಕೃಷಿಕ ಆತ್ಮಹತ್ಯೆ
ಸುಳ್ಯ: ಅಡಿಕೆಯ ಹಳದಿ ರೋಗಕ್ಕೆ ಔಷಧ ಸಿಂಪಡಿಸಿದರೂ ಕಡಿಮೆಯಾಗದ ಕಾರಣ ಮನನೊಂದು ಕೃಷಿಕರೋರ್ವರು ಆತ್ಮಹತ್ಯೆ ಮಾಡಿಕೊಂಡು ಶವವಾಗಿ ಪತ್ತೆಯಾದ ಘಟನೆ ಸುಳ್ಯ ಆಲೆಟ್ಟಿ ಗ್ರಾಮದ ಗೂಡಿಂಜದ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಕೃಷಿಕರನ್ನು ಆಲೆಟ್ಟಿ ಗ್ರಾಮದ ಬಡ್ಡಡ್ಕ ಚಳ್ಳಂಗಾರ್ ರಾಮಣ್ಣ ಅವರ ಪುತ್ರ ಜಗದೀಶ್ (56) ಎಂದು ಗುರುತಿಸಲಾಗಿದೆ.
ಜಗದೀಶ್ ಜ.3 ರಂದು ಮನೆಯಿಂದ ಸುಳ್ಯಕ್ಕೆಂದು ಹೋದವರು ಮನೆಗೆ ಮರಳಿ ಬರದ ಹಿನ್ನಲೆಯಲ್ಲಿ ಮನೆಯವರು ಜ.4ರಂದು ರಂದು ಆಲೆಟ್ಟಿ ಗ್ರಾಮದ ಗೂಡಿಂಜದ ಅರಣ್ಯ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಅವರು ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಆತ್ಮಹತ್ಯೆ ಮಾಡಿಕೊಂಡ ಜಗದೀಶ್ ಹೊಟ್ಟೆನೋವಿನಿಂದಲೂ ಬಳಲುತ್ತಿದ್ದರು. ಒಂದು ವರ್ಷದಿಂದ ತೋಟಕ್ಕೆ ಹಳದಿರೋಗ ಬಂದಿದ್ದು, ಎಷ್ಟೇ ಔಷಧ ಸಿಂಪಡಿಸಿದರೂ ನಿಯಂತ್ರಣಕ್ಕೆ ಬಂದಿರಲಿಲ್ಲ. ಇದರಿಂದಾಗಿ ಭವಿಷ್ಯದ ಬಗ್ಗೆ ಚಿಂತೆಗೀಡಾಗಿ ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ.
ಇನ್ನು ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





