ನಾಗ್ಪುರ: ಕಾರಿಗೆ ಟ್ರಕ್ ಢಿಕ್ಕಿ, ಆರು ಮಂದಿ ಸ್ಥಳದಲ್ಲೇ ಮೃತ್ಯು
ನಾಗ್ಪುರ: ಕಾರಿಗೆ ಟ್ರಕ್ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕಟೋಲ್ ತಾಲೂಕಿನ ಸೋನ್ಖಾಂಬ್ನಲ್ಲಿ ಶುಕ್ರವಾರ ಮಧ್ಯರಾತ್ರಿ ಸಂಭವಿಸಿದೆ.
ಮೃತರನ್ನು ಅಜಯ್ ದಶರತ್ ಚಿಖಲೆ (45), ವಿಠ್ಠಲ್ ದಿಗಂಬರ ತೋಟೆ (45), ಸುಧಾಕರ ರಾಮಚಂದ್ರ ಮಾನಕರ್ (42), ರಮೇಶ್ ಓಂಕಾರ್ ಹೆಲೊಂಡೆ (48), ಮಯೂರ್ ಮೊರೇಶ್ವರ್ ಇಂಗಳೆ (26) ಮತ್ತು ವೈಭವ್ ಸಾಹೇಬರಾವ್ ಚಿಖಲೆ (32) ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ ನಾಗ್ಪುರದಿಂದ ಕಟೋಲ್ ಕಡೆಗೆ ಕಾರಿನಲ್ಲಿ ಏಳು ಜನರು ಪ್ರಯಾಣಿಸುತ್ತಿದ್ದಾಗ ಟ್ರಕ್ ಕಾರಿಗೆ ಬಲವಾಗಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನು ನಾಗ್ಪುರದ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯ ಟ್ರಾಮಾ ಸೆಂಟರ್ಗೆ ದಾಖಲಿಸಲಾಗಿದೆ. ಘಟನೆಯಿಂದ ಕಾರು ಸಂಪೂರ್ಣ ಛಿದ್ರವಾಗಿದ್ದು ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.




