ಲೋಕಸಭೆಯಲ್ಲಿ ಅಶ್ರುವಾಯು ದಾಳಿ ನಡೆಸಿದ ಪ್ರಕರಣ:
ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೆಸರಲ್ಲಿ ಪಡೆದ ಸಂಸತ್ ಪಾಸ್!
ದೆಹಲಿ: ಲೋಕಸಭೆಯಲ್ಲಿ ಇಂದು ಬುಧವಾರ ಭಾರೀ ಭದ್ರತಾ ಲೋಪದ ಘಟನೆ ನಡೆದಿದ್ದು, ಸಂಸತ್ತಿನ ಮೇಲೆ ದಾಳಿಯ 22ನೇ ವಾರ್ಷಿಕೋತ್ಸವದಂದು ಇಬ್ಬರು ಒಳನುಸುಳಿ ಸಂದರ್ಶಕರ ಗ್ಯಾಲರಿಯಿಂದ ಜಿಗಿದು ಸದನದ ಸುತ್ತಲೂ ಓಡಾಡಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.

‘ಅಶ್ರುವಾಯು(ಟಿಯರ್ ಗ್ಯಾಸ್ ರೀತಿಯ) ಡಬ್ಬಿಗಳನ್ನು ಹೊತ್ತು ನುಸುಳಿದ್ದರು’ ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ. ಕೂಡಲೇ ಸದನವನ್ನು ಮುಂದೂಡಲಾಗಿದೆ.
ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮಾತನಾಡಿ, “ಇಬ್ಬರು ವ್ಯಕ್ತಿಗಳು ಸಾರ್ವಜನಿಕ ಗ್ಯಾಲರಿಯಿಂದ ಲೋಕಸಭೆಯ ಕೊಠಡಿಗೆ ಜಿಗಿದಿದ್ದಾರೆ. ಎರಡನೇ ವ್ಯಕ್ತಿಯು ಸಾರ್ವಜನಿಕ ಗ್ಯಾಲರಿಯಲ್ಲಿ ನೇತಾಡುತ್ತಿದ್ದನು. ಒಂದು ರೀತಿಯ ‘ಅನಿಲ’ ಸಿಂಪಡಿಸುತ್ತಿದ್ದನು, ಅದು ಕಣ್ಣಿನ ಕಿರಿಕಿರಿಗೆ ಕಾರಣವಾಯಿತು” ಎಂದು ಹೇಳಿದ್ದಾರೆ.
ಇಬ್ಬರು ವ್ಯಕ್ತಿಗಳು ಟಿಯರ್ ಗ್ಯಾಸ್ ರೀತಿಯ ವಸ್ತುಗಳನ್ನು ಹೊಡೆದ ಪರಿಣಾಮ ಹೊಗೆ ತುಂಬಿರುವುದಾಗಿ ವರದಿಯಾಗಿದೆ.
22 ವರ್ಷದ ಉತ್ತರ ಪ್ರದೇಶದ ಲಕ್ನೋ ನಿವಾಸಿ ಸಾಗರ್ ಶರ್ಮಾ ಹಾಗೂ ನೀಲಂ ಕೌರ್ ಎಂಬಾಕೆಯನ್ನು ಬಂಧಿಸಲಾಗಿದೆ. ಇಬ್ಬರು ಲೋಕಸಭೆಯ ಒಳಗೆ ನುಗ್ಗಿದರೆ, ಇನ್ನಿಬ್ಬರು ಲೋಕಸಭೆಯ ಹೊರಗೆ, ‘ನಹೀ ಚಲೇಗಿ ನಹೀ ಚಲೇಗಿ, ತಾನಾಶಾಹಿ ನಹೀ ಚಲೇಗಿ’ ಎಂದು ಘೋಷಣೆ ಕೂಗುತ್ತಿದ್ದರು. ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ನೀಡಿರುವ ಸಂಸದ ಡ್ಯಾನಿಶ್ ಅಲಿ, “ದಾಳಿ ನಡೆಸಿದ ಯುವಕರ ಪೈಕಿ ಓರ್ವ ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೆಸರಲ್ಲಿ ಪಾಸ್ ಪಡೆದಿದ್ದರು” ಎಂದು ಮಾಹಿತಿ ನೀಡಿದ್ದಾರೆ.




