ಬಂಟ್ವಾಳ: ಕೆಲವು ತಪ್ಪು ಮಾಹಿತಿಗಳಿಂದಾಗಿ ಕಲ್ಲಡ್ಕ ಪ್ರಭಾಕರ ಭಟ್ ರನ್ನು ಟೀಕಿಸಿದ್ದೆ: ಕುಮಾರಸ್ವಾಮಿ
ಬಂಟ್ವಾಳ: ಕೆಲವು ತಪ್ಪು ಮಾಹಿತಿಗಳಿಂದಾಗಿ ಈ ಹಿಂದೆ ನಾನು ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಟೀಕಿಸಿದ್ದೆ. ಆದರೆ ಈಗ ನನಗೆ ಅವರು ಏನು ಎಂಬುದರ ಅರಿವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶನಿವಾರ ರಾತ್ರಿ ಹೊನಲು ಬೆಳಕಿನ ಕ್ರೀಡೋತ್ಸವ ವೀಕ್ಷಿಸಿದ ಬಳಿಕ ಅವರು ಮಾತನಾಡಿದರು.
ಹಿಂದೆ ಒಂದು ರೀತಿಯಾಗಿ ಮಾತನಾಡುತ್ತಿದ್ದ ಕುಮಾರಸ್ವಾಮಿ ಈ ಕಾರ್ಯಕ್ರಮ ಭಾಗವಹಿಸಿದ್ದು ಹೇಗೆ ಎಂದು ಕೆಲವರು ಯೋಚಿಸಬಹುದು. ಅಂದು ನನ್ನನ್ನು ಕೆಲವರು ದಾರಿ ತಪ್ಪಿಸಿದ್ದರು. ನಾನು ತಪ್ಪು ಮಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.
ಚಂದ್ರಯಾನ ಉಡಾವಣೆಯನ್ನು ಕಣ್ಣಿಗೆ ಕಟ್ಟುವ ಹಾಗೆ ತೋರಿಸಿದ್ದೀರಿ. ಮಕ್ಕಳಿದ್ದಾಗ ರಾಮನ ಭಜನೆ ಮಾಡಿದನ್ನು ಇವತ್ತು ಮತ್ತೆ ನೆನಪಿಸಿದ್ದೀರಿ. ಪ್ರಭಾಕರ ಭಟ್ ಬದುಕಿನ ಒಳ್ಳೆಯ ನಡವಳಿಕೆ ಕಲಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಕಣ್ಣು ತೆರೆಸುತ್ತಿದ್ದೀರಿ ಎಂದು ಹೇಳಿದರು.
ಇಲ್ಲಿಗೆ ಬಾರದೇ ಇದ್ದಿದ್ದರೆ ನನ್ನ ಜೀವನದಲ್ಲಿ ನಷ್ಟವಾಗುತಿತ್ತು. ಈ ಶಾಲೆಯ ಸಂಸ್ಥಾಪಕರಾದ ಪ್ರಭಾಕರ ಭಟ್ ಅವರು ಸಮಾಜ ಶಿಕ್ಷಣಕ್ಕೆ ನೀಡುತ್ತಿರುವ ಕೊಡುಗೆ ಅಪಾರವಾಗಿದೆ. ಬಾಲ್ಯದಲ್ಲಿ ನಾನು ಶ್ರೀರಾಮನ ಭಜನೆ ಮಾಡುತ್ತಿದ್ದ ದಿನಗಳನ್ನು ಕ್ರೀಡೋತ್ಸವ ಮತ್ತೆ ನೆನಪಿಸಿತು. ಬಾಂಧವ್ಯದ ಕೊರತೆ ಕಾಣುತ್ತಿರುವ ಈ ಸಂದರ್ಭದಲ್ಲಿ ಸೌಹಾರ್ದದ ದಿನಗಳನ್ನು ಕಾಣಲು ಸಂಸ್ಕೃತಿಯ ಬದುಕನ್ನು ಶಿಕ್ಷಣದ ಮೂಲಕ ಕೊಡುತ್ತಿರುವ ಹಾಗೂ ಸರಕಾರದ ಕಣ್ತೆರಸುವ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿರುವ ಡಾ.ಭಟ್ ಅವರ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಲ್ಲಡ್ಕ ಡಾ.ಪ್ರಭಾಕರ ಭಟ್ ಬಗ್ಗೆ ನಾನು ಬೇರೆ ಏನೋ ತಿಳಿದುಕೊಂಡಿದ್ದೆ. ಇಲ್ಲಿಗೆ ಬರುವುದಕ್ಕೂ ಮೊದಲು ಅವರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಕೆಲವೊಮ್ಮೆ ನನಗೆ ಸಿಗುವ ಮಾಹಿತಿಗಳು ತಪ್ಪು ಅಭಿಪ್ರಾಯಕ್ಕೆ ಕಾರಣವಾಗುತ್ತವೆ. ಸೌಹಾರ್ದತೆಯ ಬದುಕಿಗೆ ಇಲ್ಲಿನ ಮಾದರಿ ಶಿಕ್ಷಣದ ಅಗತ್ಯವಿದೆ ಎಂದು ಹೇಳಿದರು.




