ತೆಲಂಗಾಣ ನೂತನ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಆಯ್ಕೆ:
ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷರಾಗಿರುವ ರೇವಂತ್ ರೆಡ್ಡಿ
ತೆಲಂಗಾಣ: ಮೊದಲ ಬಾರಿಗೆ ತೆಲಂಗಾಣ ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಪಕ್ಷವು ಇದೀಗ ನೂತನ ಮುಖ್ಯಮಂತ್ರಿಯ ನೇಮಕ ಮಾಡಿದೆ. ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಅವರನ್ನು ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.
ಹೊಸದಿಲ್ಲಿಯಲ್ಲಿ ನಡೆದ ಹೈಕಮಾಂಡ್ ಸಭೆಯ ಬಳಿಕ ಈ ನಿರ್ಧಾರ ಹೊರಬಿದ್ದಿದೆ. ತೆಲಂಗಾಣ ಶಾಸಕಾಂಗ ಪಕ್ಷದ ನೂತನ ಸಿಎಲ್ಪಿಯಾಗಿ ರೇವಂತ್ ರೆಡ್ಡಿ ಅವರೊಂದಿಗೆ ಕಣಕ್ಕಿಳಿಯಲು ಕಾಂಗ್ರೆಸ್ ಅಧ್ಯಕ್ಷರು ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.
ಡಿಸೆಂಬರ್ 7 ರಂದು ತೆಲಂಗಾಣ ನೂತನ ಸಿಎಂ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದ ಹಿರಿಯ ಕಾಂಗ್ರೆಸ್ ನಾಯಕರಾದ ಉತ್ತಮ್ ಕುಮಾರ್ ರೆಡ್ಡಿ ಮತ್ತು ಭಟ್ಟಿ ವಿಕ್ರಮಾರ್ಕ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬಹುದು ಅಥವಾ ಉತ್ತಮ ಖಾತೆಗೆ ಅವಕಾಶ ಕಲ್ಪಿಸಬಹುದು. ರಾಜ್ಯದಲ್ಲಿ ರೊಟೇಶನ್ ಸಿಎಂ ಸೂತ್ರ ಇರುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಅನುಭವಿ ರಾಜಕಾರಣಿ ಮತ್ತು ಮಲ್ಕಾಜ್ಗಿರಿಯ ಲೋಕಸಭಾ ಸಂಸದ, ರೇವಂತ್ ರೆಡ್ಡಿ ತೆಲಂಗಾಣ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ. 2017 ರಲ್ಲಿ ತೆಲುಗು ದೇಶಂ ಪಕ್ಷದಿಂದ (ಟಿಡಿಪಿ) ಕಾಂಗ್ರೆಸ್ಗೆ ಬಂದ ರೇವಂತ್ ರೆಡ್ಡಿ ಬಳಿಕ ರಾಜ್ಯದ ಪ್ರಮುಖ ರಾಜಕಾರಣಿಯಾಗಿ ಬೆಳೆದಿದ್ದಾರೆ.




