ಉಳ್ಳಾಲ ಕ್ಷೇತ್ರದಲ್ಲಿರುವ ತುಕ್ಕು ಹಿಡಿದಿರುವ ಘನತ್ಯಾಜ್ಯ ವಾಹನ: ಹೀಗೊಂದು ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಮಂಗಳೂರು: ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಪ್ರತಿನಿಧಿಸುವ ಕ್ಷೇತ್ರದಲ್ಲಿರುವ ನಗರ ಸ್ಥಳೀಯ ಸಂಸ್ಥೆಗಳ ದುಃಸ್ಥಿತಿಯ ಬಗ್ಗೆ ಬೆಳಕು ಚೆಲ್ಲುವ ಎನ್ನಲಾಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಗಳೂರಿನ ಉಳ್ಳಾಲದಲ್ಲೇ ಬಾಗಿಲನ್ನು ಹಗ್ಗದಿಂದ ಕಟ್ಟಿ, ಚಾಲಕ ಕಿಟಕಿ ಮೂಲಕ ನುಸುಳಿ ವಾಹನಕ್ಕೆ ಹೋಗುತ್ತಾನೆ. ಹೀಗೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಪ್ರತಿನಿಧಿಸುವ ಉಳ್ಳಾಲ ವಿಧಾನಸಭಾ ಕ್ಷೇತ್ರದ ಉಳ್ಳಾಲ ನಗರಸಭೆಯ ಕಸ ಸಂಗ್ರಹ ವಾಹನದ ದುಸ್ಥಿತಿಯ ವಿಡಿಯೋ ಕಂಡ ಜನರ ಈಗ ನಗರಸಭೆ ಆಡಳಿತಕ್ಕೆ ಛೀಮಾರಿ ಹಾಕುತ್ತಿದ್ದಾರೆ.
ಕಸದ ವಾಹನದ ಚಾಲಕ ಹಗ್ಗ ಕಟ್ಟಿ ಡೋರ್ ಮುಚ್ಚಿದ ಬಳಿಕ ವಾಹನದೊಳಗೆ ನುಸುಳಿಕೊಂಡು ಚಾಲಕನ ಸೀಟಿನಲ್ಲಿ ಕುಳಿತು ವಾಹನ ಚಲಾಯಿಸಬೇಕಾದ ಅಸಹಾಯಕ ಸ್ಥಿತಿ ನಿರ್ಮಾಣವಾಗಿದೆ.




