ಕೋಲಾರ: ಕಬರ್ ಸ್ಥಾನದಲ್ಲಿದ್ದ ತಾಯಿ, ಮಗುವಿನ ಮೃತದೇಹ ಕಳ್ಳತನ
ಕೋಲಾರ: ವಾಮಾಚಾರಕ್ಕಾಗಿ ಮೃತದೇಹವನ್ನು ಸ್ಮಶಾನದಿಂದ ಹೊರತೆಗೆದು ಕೂದಲು ಹಾಗೂ ಬಟ್ಟೆಯನ್ನು ತೆಗೆದುಕೊಂಡಿರುವ ಆರೋಪ ಕೋಲಾರದಲ್ಲಿ ಕೇಳಿ ಬಂದಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೆಬ್ಬಟ ಕ್ರಾಸ್ನಲ್ಲಿ ಈ ಘಟನೆ ನಡೆದಿದೆ. ಕಳೆದ 20 ದಿನಗಳ ಹಿಂದೆ ಮೂರುವರೆ ವರ್ಷದ ಮಗುವಿನೊಂದಿಗೆ ಮಹಿಳೆ ಹಮಿದ ಆತ್ಮಹತ್ಯೆಗೆ ಶರಣಾಗಿದ್ದಳು.
ನಂತರ ಇಬ್ಬರ ಶವವನ್ನು ಹೆಬ್ಬಟ ಕ್ರಾಸ್ನ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ನವೆಂಬರ್ 19 ರಂದು ಶವಗಳನ್ನು ಹೊರತೆಗೆದು ಕೂದಲು ಹಾಗೂ ಮಗು ಧರಿಸಿದ್ದ ಬಟ್ಟೆ ತೆಗೆದುಕೊಂಡಿದ್ದಾರೆ ಎಂದು ಮೃತ ಹಮಿದ ಪೋಷಕರು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾರೆ.
ಹಮಿದ ಪತಿ ಶೊಯಬ್ ಸೂಚನೆಯಂತೆ ಮಗುವಿನ ಶವ ಹೊರತೆಗೆದು ಕೃತ್ಯವೆಸಗಿರುವುದಾಗಿ ಆರೋಪಿಸಲಾಗಿದೆ. ತಾಯಿ ಹಾಗೂ ಮಗಳ ಶವವನ್ನು ಸ್ಮಶಾನಕ್ಕೆ ತೆರಳಿ ಹೊರತೆಗೆದಿದ್ದಾರೆಂದು ಶ್ರೀರಾಮ್ ಹಾಗೂ ನಾರಾಯಣಸ್ವಾಮಿ ಎನ್ನುವವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ನವೆಂಬರ್ 19 ರಂದು ಬೆಳ್ಳಂಬೆಳಗ್ಗೆ ಇಬ್ಬರು ಸ್ಮಶಾನಕ್ಕೆ ತೆರಳಿ, ತಡವಾಗಿ ವಾಪಸ್ ಆಗಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ವೀಡಿಯೋ ಆಧರಿಸಿ ವಾಮಾಚಾರ ಮಾಡಲೆಂದು ಮೃತದೇಹಗಳನ್ನು ಹೊರತೆಗೆದಿದ್ದಾರೆ ಎಂದು ಪೋಷಕರು ದೂರು ನೀಡಿದ್ದಾರೆ.




