ಕೇರಳ- ಕರ್ನಾಟಕ ಗಡಿ ನಿರ್ಬಂಧ:
ಕೇರಳ ಗವರ್ನರ್ ಮತ್ತು ಮುಖ್ಯಮಂತ್ರಿ ಯನ್ನು ಭೇಟಿಯಾದ ಶಾಸಕ ಎ.ಕೆ.ಎಮ್ ಅಶ್ರಫ್

ತಿರುವನಂತಪುರಂ: ಕೋವಿಡ್ ಸೋಂಕು ಇಳಿಮುಖವಾಗಿದ್ದರೂ, ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದ ಹೊಸ ರೂಪಾಂತರದ ಓಮಿಕ್ರಾನ್ನ ಹಿನ್ನೆಲೆಯಲ್ಲಿ ಕೇರಳದಿಂದ ಕರ್ನಾಟಕಕ್ಕೆ ಪ್ರಯಾಣಿಸಲು ಮತ್ತೆ ನಿರ್ಬಂಧ ಹೇರಿರುವುದನ್ನು ವಿರೋಧಿಸಿ ಮಂಜೇಶ್ವರಂ ಶಾಸಕ ಎಕೆಎಂ ಅಶ್ರಫ್ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.
ಕೇರಳ, ಕಾಸರಗೋಡಿನ ಅದರಲ್ಲೂ ಮಂಜೇಶ್ವರದ ಜನರು ತಮ್ಮ ಶಿಕ್ಷಣ, ಆರೋಗ್ಯ ಮತ್ತು ವ್ಯಾಪಾರದ ಅಗತ್ಯಗಳಿಗಾಗಿ ಬಹಳ ಹಿಂದಿನಿಂದಲೂ ಮಂಗಳೂರು ನಗರವನ್ನು ಅವಲಂಬಿಸಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ಮಂಗಳೂರನ್ನು ಅವಲಂಬಿಸಿದ್ದಾರೆ
ರೋಗಿಗಳು, ಪ್ರಯಾಣಿಕರು, ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರು ಮತ್ತು ವ್ಯಾಪಾರಿಗಳು ಆರ್ಟಿಪಿಸಿಆರ್ ಪರೀಕ್ಷೆ ಮರು ಹೇರಿಕೆಯಿಂದ ಪ್ರತಿನಿತ್ಯ ಬಿಕ್ಕಟ್ಟಿಗೆ ಸಿಲುಕಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಮೊದಲ ಹಂತದಲ್ಲಿ ಗಡಿ ನಿರ್ಬಂಧಗಳನ್ನು ಹೇರಿದ ನಂತರ ತಜ್ಞರ ಚಿಕಿತ್ಸೆ ಪಡೆಯದೆ 22 ಜನರು ಸಾವನ್ನಪ್ಪಿದ್ದಾರೆ. ಕೇಂದ್ರ ಗೃಹ ಸಚಿವಾಲಯದ ಆದೇಶವನ್ನು ಧಿಕ್ಕರಿಸಿ ರಾಜ್ಯಕ್ಕೆ ಮತ್ತು ಹೊರಗೆ ಪ್ರಯಾಣಿಸದಂತೆ ಕರ್ನಾಟಕ ಸರ್ಕಾರವು ಹೊಸ ನಿರ್ಬಂಧಗಳನ್ನು ವಿಧಿಸಿದೆ ಎಂದು ಶಾಸಕರು ಹೇಳಿದರು. ಎರಡು ಡೋಸ್ ಲಸಿಕೆ ಪಡೆದ ಪ್ರಯಾಣಿಕರನ್ನು ಕೂಡ ಗಡಿ ದಾಟಲು ಸಹ ಅನುಮತಿಸದೆ ಸಂಕಷ್ಟದಲ್ಲಿರುವ ಪ್ರಯಾಣಿಕರ ಪ್ರಕರಣದಲ್ಲಿ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದರು.