ವಿಟ್ಲ: ದ. ಕ. ಜಿಲ್ಲಾ ದಲಿತ್ ಸೇವಾ ಸಮಿತಿ, ರಾಜ್ಯ ರೈತ ಸಂಘ, ಕಿದ್ಮತ್ ಪೌಂಡೇಶನ್ ವಿಟ್ಲ ವಲಯದ ನೇತೃತ್ವದಲ್ಲಿ ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆ
ವಿಟ್ಲ: ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೂಕ್ತ ಮೂಲ ಸೌಕರ್ಯ ಒದಗಿಸಬೇಕೆಂಬ ನಿಟ್ಟಿನಲ್ಲಿ ದ. ಕ. ಜಿಲ್ಲಾ ದಲಿತ್ ಸೇವಾ ಸಮಿತಿ, ರಾಜ್ಯ ರೈತ ಸಂಘ, ಕಿದ್ಮತ್ ಪೌಂಡೇಶನ್ ವಿಟ್ಲ ವಲಯದ ನೇತೃತ್ವದಲ್ಲಿ ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆ ನಡೆಯಿತು.
ದ. ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು ಮಾತನಾಡಿ ಸರ್ಕಾರದ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಆಸ್ಪತ್ರೆಗೆ ಅಗತ್ಯ ವ್ಯವಸ್ಥೆಗಳು ಬಂದಿಲ್ಲ. ಇದರಿಂದಾಗಿ ಬಡವರು ತುರ್ತು ಸಂದರ್ಭ ದಲ್ಲಿ ಮಂಗಳೂರಿನ ಆಸ್ಪತ್ರೆಯನ್ನು ಆಶ್ರಯಿಸಬೇಕಾಗಿದೆ. ಆರೋಗ್ಯ ರಕ್ಷಕರ ಸಭೆಯನ್ನು ನಡೆಸಿದ ಸಂದರ್ಭ ಅಗತ್ಯ ಬೇಡಿಕೆಯನ್ನು ಬಿಟ್ಟು, ವಾಹನ ನಿಲ್ಲಿಸಲು ಜಾಗ ಇಲ್ಲ, ಮೀಟಿಂಗ್ ಹಾಲ್ ಇಲ್ಲ ಎಂಬ ಚರ್ಚೆಗಳನ್ನು ಮಾಡಲಾಗಿದೆ. ವ್ಯವಸ್ಥೆಯ ಬಗ್ಗೆ ಮಾತನಾಡುವವರನ್ನು ಹೊರಗಿಡುವ ಕಾರ್ಯವಾಗುತ್ತಿದೆ ಎಂದು ತಿಳಿಸಿದರು.
ಎ.ಐ.ಸಿ.ಸಿ.ಟಿ.ಯು. ಮುಖಂಡ ರಾಮಣ್ಣ ವಿಟ್ಲ ಮಾತನಾಡಿ ಖಾಸಗೀ ಆಸ್ಪತ್ರೆಯ ಲಾಭಿಗಳನ್ನು ನಿಲ್ಲಿಸುವ ನಿಟ್ಟಿನಲ್ಲಿ ಜನರು ಒಗ್ಗಟ್ಟು ಆಗಬೇಕಾಗಿದೆ. ಗ್ರಾಮೀಣ ಭಾಗದಲ್ಲಿ ಸೇವೆ ನೀಡಬೇಕಾದ ವೈದ್ಯರು, ನಗರ ಕಡೆಗೆ ಮುಖ ಮಾಡುತ್ತಿದ್ದಾರೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ. ಸರ್ಕಾರಿ ಆಸ್ಪತ್ರೆಯನ್ನು ಅಭಿವೃದ್ಧಿ ಮಾಡುವ ಕಾರ್ಯವಾಗಬೇಕು. ಆಸ್ಪತ್ರೆಯ ಹಾಗೂ ಅಭಿವೃದ್ಧಿಯ ಬಗ್ಗೆ ಮಾತನಾಡಬೇಡಿ ಎಂದು ಹೇಳುವ ಸಂಸದರು ಜಿಲ್ಲೆಗೆ ಅಗತ್ಯವಿದೆಯಾ ಎಂದು ಪ್ರಶ್ನಿಸಿದರು.
ಸ್ಥಳಕ್ಕೆ ಡಿ.ಎಚ್.ಒ. ಅಥವಾ ಶಾಸಕರು ಬರುವವರೆಗೆ ಪ್ರತಿಭಟನೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಪ್ರತಿಭಟನಾ ಕಾರರು ಪಟ್ಟು ಹಿಡಿದರು. ಬಳಿಕ ಜಿಲ್ಲಾ ಆರೋಗ್ಯ ಅಧಿಕಾರಿ ತಿಮ್ಮಯ್ಯ, ತಾಲೂಕು ಆರೋಗ್ಯ ಅಧಿಕಾರಿ ಅಶೋಕ್ ರೈ ಸ್ಥಳಕ್ಕೆ ನೀಡಿ ಸರ್ಕಾರಕ್ಕೆ ವಿಚಾರ ತಿಳಿಸಿ ಸಮಸ್ಯೆ ಬಗೆ ಹರಿಸಲು ಪ್ರಶ್ನಿಸುವ ಭರವಸೆಯನ್ನು ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಕಿದ್ಮತ್ ಪೌಂಡೇಶನ್ ವಿಟ್ಲ ವಲಯ ಅಧ್ಯಕ್ಷ ಹಾಜಿ ಕೆ ಎ ಅಬ್ದುಲ್ ಹಮೀದ್ ಕೊಡಂಗಾಯಿ, ಸಲೀಂ ಬೈರಿಕಟ್ಟೆ, ಮಹಮ್ಮದ್ ಇಕ್ಬಾಲ್ ವಿಟ್ಲ, ದಲಿತ ಸೇವಾ ಸಮಿಯಿ ಜಿಲ್ಲಾಧ್ಯಕ್ಷ ಸೋಮಪ್ಪ ನಾಯ್ಕ ಮಲ್ಯ, ಕಾರ್ಯಾಧ್ಯಕ್ಷ ಚಂದ್ರಶೇಖರ್ ಯು. ವಿಟ್ಲ, ಜಿಲ್ಲಾಧ್ಯಕ್ಷೆ ಮೀನಾಕ್ಷಿ ನೆಲ್ಲಿಗುಡ್ಡೆ, ಉಪಾಧ್ಯಕ್ಷ ಪ್ರಸಾದ್ ಬೊಳ್ಮಾರು, ವಿಮಲ ಸೀಗೆಬಲ್ಲೆ ಉಪಸ್ಥಿತರಿದ್ದರು.